ಕನ್ನಡ ಕರಿನಾಗರ ಎಂದೇ ಹೆಗ್ಗಳಿಕೆ ಹೊತ್ತ ದುನಿಯಾ ಖ್ಯಾತಿಯ ವಿಜಯ್, ಎಂ.ಎಸ್.ರಮೇಶ್ ನಿರ್ದೇಶನದ ಐಪಿಎಸ್ ಶಂಕರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೆ.ಮಂಜು ನಿರ್ಮಾಣದ ಈ ಹೊಸ ಚಿತ್ರದಲ್ಲಿ ವಿಜಯ್ ಹೊಸ ಲುಕ್ನಲ್ಲಿ ಬರುತ್ತಿದ್ದಾರೆ. ಈಗಾಗಲೇ ವಿಜಯ್ ಅಭಿನಯದ ಸಾಧು ಕೋಕಿಲಾ ನಿರ್ದೇಶನದ ದೇವರು ಚಿತ್ರ ಪೂರ್ಣಗೊಂಡಿದ್ದು ನವೆಂಬರ್ 6ರಂದು ಬಿಡುಗಡೆಗೊಳ್ಳುವ ಸಾಧ್ಯತೆಗಳೂ ಇವೆ.
ಐಪಿಎಸ್ ಶಂಕರ್ ಬಗ್ಗೆ ವಿಜಯ್ ಹೇಳೋದು ಇಷ್ಟು. ದೇವರು ಚಿತ್ರದಲ್ಲಿ ಸೆಕೆಂಡ್ ಹಾಫ್ನಲ್ಲಿ ಪೂರ್ತಿಯಾಗಿ ನಾನು ತಲೆಯನ್ನು ಗುಂಡು ಹೊಡೆಸಬೇಕಿತ್ತು. ಹಾಗಾಗಿ ಪೂರ್ತಿ ಬೋಳು ಮಾಡಿಸಿಕೊಂಡ ತಲೆಯಲ್ಲಿ ಮತ್ತೆ ಕೂದಲು ಚಿಗುರಲು ಸ್ವಲ್ಪ ಕಾಲ ಕಾಲಬೇಕಾಯ್ತು. ಹಾಗಾಗಿ ಐಪಿಎಸ್ ಶಂಕರ್ ಮುಂದಕ್ಕೆ ಹೋಯ್ತು ಎನ್ನುತ್ತಾರೆ ವಿಜಯ್.
ಐಪಿಎಸ್ ಶಂಕರ್ ಚಿತ್ರದಲ್ಲಿ ಡಿಫರೆಂಟಾಗಿ ಕಾಣಿಸಲಿದ್ದೇನೆ. ಅದಕ್ಕಾಗಿ ಪ್ರತಿದಿನ ಎರಡು ಗಂಟೆ ಜಿಮ್ನಲ್ಲಿ ದೇಹದಂಡಿಸುತ್ತಿದ್ದೇನೆ. ಈ ಚಿತ್ರದಲ್ಲಿ ಲುಕ್ ಮಾತ್ರ ಡಿಫರೆಂಟ್ ಅಲ್ಲ. ಡೈಲಾಗ್ ಡೆಲಿವರಿ ಕೂಡಾ ಡಿಫರೆಂಟ್. ಈವರೆಗೆ ಬಹುತೇಕ ಸಿನಿಮಾಗಳಲ್ಲಿ ನನಗೆ ಹಳ್ಳಿ ಭಾಷೆಯ ಮಾತಿತ್ತು. ಈ ಚಿತ್ರದಲ್ಲಿ ನನ್ನ ಡೈಲಾಗು ಪಕ್ಕಾ ಸಿಟಿ ಕನ್ನಡ. ಅಷ್ಟೇ ಅಲ್ಲ, ಅಲ್ಲಲ್ಲಿ ಇಂಗ್ಲೀಷ್ ಶಬ್ದಗಳ ಮಿಶ್ರಣವಿರುವ ಕನ್ನಡ ಎನ್ನುತ್ತಾರೆ ವಿಜಯ್.
ಬೆಂಗಳೂರಿನವರೇ ಆಧ ಮಾಡೆಲ್ ಕ್ಯಾಥರೀನ್ ಈ ಚಿತ್ರಕ್ಕೆ ನಾಯಕಿ. ಚಿತ್ರದ ಇನ್ನೊಬ್ಬ ನಾಯಕಿಯಾಗಿ ವೀರಮದಕರಿ ಖ್ಯಾತಿಯ ರಾಗಿಣಿ ಆಯ್ಕೆಯಾಗಿದದಾರೆ. ಇಬ್ಬರಿಗೂ ತುಂಬಾ ಗ್ಲ್ಯಾಮರಸ್ ಆಗಿರುವ ಪಾತ್ರ ಎಂದು ಚಿತ್ರದ ಬಗ್ಗೆ ವಿವರಿಸುತ್ತಾರೆ ವಿಜಯ್.
ವಿಜಯ್ ಅಭಿನಯದ ಇನ್ನೊಂದು ಚಿತ್ರ ಕರಿ ಚಿರತೆ ಕೂಡಾ ಬಹುತೇಕ ಪೂರ್ಣಗೊಂಡಿದೆ. ಈ ಚಿತ್ರದ ಎರಡನೇ ಭಾಗದಲ್ಲಿ ಹಿಂಸೆಯೇ ಮೇಳೈಸುತ್ತದಂತೆ. ಮೊದಲರ್ಧಕ್ಕೂ ಎರಡನೇ ಅರ್ಧಕ್ಕೂ ಚಿತ್ರದಲ್ಲಿ ಭಾರೀ ಬದಲಾವಣೆಗಳಾಗುತ್ತದೆ. ಹಾಗಾಗಿ ಚಿತ್ರ ತುಂಬಾ ಡಿಫರೆಂಟ್ ಆಗಿದೆ ಎಂದು ಮೊದಲೇ ಸರ್ಟಿಫಿಕೆಟ್ ಕೊಡ್ತಾರೆ ವಿಜಯ್.
ಕರಿಚಿರತೆ ಚಿತ್ರ ನನ್ನ ಕೆರಿಯರ್ನಲ್ಲಿ ತುಂಬ ವಿಶೇಷವಾದುದು ಎನ್ನುವ ವಿಜಯ್, ಇದರಲ್ಲಿ ನಾಯಕ ಪ್ರಾಣಿಗಳ ಕೆಲವು ಪ್ರವೃತ್ತಿಗಳನ್ನು ಹೊಂದಿರುತ್ತಾನೆ. ಅದು ಆತ ಹುಟ್ಟಿ ಬೆಳೆದ ಪರಿಸರದಿಂದ ಬಂದಿರುತ್ತದೆ ಎಂದು ವಿವರಿಸುತ್ತಾರೆ. ಕರಿಚಿರತೆಯಲ್ಲಿ ಮೊದಲರ್ಧದಲ್ಲಿ ಯಜ್ಞಾ ಶೆಟ್ಟಿ ನಾಯಕಿಯಾದರೆ, ಎರಡನೇ ಅರ್ಧದಲ್ಲಿ ಶರ್ಮಿಳಾ ಮಾಂಡ್ರೆ ನಾಯಕಿಯಾಗಿದ್ದಾರೆ.