ಕನ್ನಡ ಕಂಡ ಸದ್ಯದ ಅತಿ ಉದ್ದದ ನಟಿಯೆಂದರೆ ರಾಗಿಣಿಯೇ. ವೀರಮದಕರಿಯಿಂದ ಕನ್ನಡಕ್ಕೆ ಪರಿಚಯವಾದ ರಾಗಿಣಿ ದರ್ಶನ್, ಸುದೀಪ್ ಹೈಟಿಗೆ ಕರೆಕ್ಟಾಗಿ ಸೂಟ್ ಆಗ್ತಾರೆ ಎಂದು ಆಕೆಯನ್ನು ಮೊದಲು ನೋಡಿದವರು ಅಂದಿದ್ದರು. ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸುಂದರ ಕೂದಲಿಗೆ ಪ್ರಶಸ್ತಿ ಗಿಟ್ಟಿಸಿಕೊಂಡು ಬಂದ ಈ ಚೆಲುವೆ ಮೊನ್ನೆ ಮೊನ್ನೆ ದರ್ಶನ್ ನಟನೆಯ ಹೆಸರಿಡದ ಚಿತ್ರಕ್ಕೆ ಆಯ್ಕೆಯೂ ಆಗಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ರಾಗಿಣಿಗೆ ನಿರ್ಮಾಪಕರು ಚಿತ್ರದಿಂದ ಗೇಟ್ ಪಾಸ್ ಕೊಟ್ಟಿದ್ದಾರೆ!
ಇದಕ್ಕೆ ಏಕೈಕ ಕಾರಣ ದರ್ಶನ್. ದರ್ಶನ್ ಹೈಟಿಗೇನೋ ರಾಗಿಣಿ ಸೂಟ್ ಆಗಿರೋದು ನಿಜ. ಆದರೆ ದರ್ಶನ್ಗೆ ಈಕೆಯನ್ನು ನೋಡಿ ನನಗೆ ಈಕೆ ಬೇಡ ಎಂದು ನಿರ್ಮಾಪಕರಿಗೆ ತಾಕೀತು ಮಾಡಿದ್ದಾರೆ. ದರ್ಶನ್ ಒತ್ತಡಕ್ಕೆ ಮಣಿದ ನಿರ್ಮಾಪಕರು, ಒಕೆ ಅಂದು ಇದೀಗ ಬೇರೆ ನಾಯಕಿಯ ಹುಡುಕಾಟದಲ್ಲಿದ್ದಾರೆ.
ದರ್ಶನ್ ಈ ಸುಂದರ ಬೆಕ್ಕಿನ ನಡಿಗೆಯ ಬೆಡಗಿ ಬೇಡ ಎನ್ನಲು ಕಾರಣವಾದ್ರೂ ಏನಂತೀರಾ? ವಿಷಯ ಸಿಂಪಲ್. ವೀರ ಮದಕರಿಯಲ್ಲಿ ನಟಿಸಿದ ಈ ಬೆಡಗಿಯನ್ನು ಮೊದಲು ದರ್ಶನ್ ಒಕೆ ಅಂದಿದ್ರು. ಆದರೆ ಈಕೆ, ಮೊನ್ನೆ ಮೊನ್ನೆ ಗೋಕುಲ ಚಿತ್ರದಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದಾಳೆ ಎಂಬ ಸುದ್ದಿ ದರ್ಶನ್ ಕಿವಿಗೆ ಬಿತ್ತು. ಈ ಸುದ್ದಿ ಬಿದ್ದದ್ದೇ ತಡ, ಐಟಂ ಹಾಡಿಗೆ ಮೈಕುಲುಕಿದ ಬೆಡಗಿ ನನಗೆ ನಾಯಕಿಯಾ? ಆ ಜಾಗಕ್ಕೆ ಬೇರೆ ಹುಡುಗಿ ತನ್ನಿ ಎಂದು ನಿರ್ಮಾಪಕರಿಗೆ ಅಪ್ಪಣೆಯಿತ್ತರಂತೆ. ಅದಕ್ಕೆ ನಿರ್ಮಾಪಕರೂ ತಲೆಬಾಗಿದರು.
ರಾಗಿಣಿ ಈ ವಿಚಾರಕ್ಕೆಲ್ಲಾ ತಲೆಕೆಡಿಸಿಕೊಂಡಿಲ್ಲ. ಗೋಕುಲ ಚಿತ್ರದಲ್ಲಿ ನಾನು ಒಪ್ಪಿಕೊಂಡ ಐಟಂ ಸಾಂಗ್ ತುಂಬಾ ಚೆನ್ನಾಗಿದೆ. ಸದ್ಯದ ಬೇಡಿಕೆಯ ಯಶಸ್ವೀ ಹರ್ಷ ಇದರ ಕೊರಿಯೋಗ್ರಾಫರ್. ಈ ಅವಕಾಶವನ್ನು ನಾನು ಬಿಡಲಿಲ್ಲ. ಖಂಡಿತ ಗೋಕುಲದ ನನ್ನ ಈ ಐಟಂ ಹಾಡು ಹಿಟ್ ಆಗುತ್ತೆ ಅನ್ನೋದು ರಾಗಿಣಿಯ ಲೆಕ್ಕಾಚಾರ.