ಮಾಡೆಲ್ ಲೋಕದಲ್ಲಿ ಬೆಕ್ಕಿನ ಹೆಜ್ಜೆಯಿಡುತ್ತಿದ್ದ ಬೆಡಗಿ ಕ್ಯಾಥರೀನ್ ಟ್ರೇಶಾ ಐಪಿಎಸ್ ಶಂಕರ್ ಚಿತ್ರದ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಅಡಿಯಿಡುತ್ತಿರುವುದು ಗೊತ್ತು. ಆ ಚಿತ್ರವಿನ್ನೂ ಬಿಡುಗಡೆಯೇ ಆಗಿಲ್ಲ. ಅಷ್ಟರಲ್ಲೇ ಅದೇ ಕ್ಯಾಥರೀನ್ಗೆ ಇನ್ನೊಂದು ಅವಕಾಶ ಬಂದೊದಗಿದೆ. ಅದು ಸುದೀಪ್ ನಾಯಕತ್ವದ ಎಸ್.ನಾರಾಯಣ್ ನಿರ್ದಶನದ ಚಿತ್ರಕ್ಕೆ ನಾಯಕಿಯಾಗೋದು. ಯಾರಿಗುಂಟು ಯಾರಿಗಿಲ್ಲ ಇಂಥಾ ಸದವಕಾಶ!!!
ಹೌದು. ಎಸ್.ನಾರಾಯಣ್ ಇದೇ ಮೊದಲ ಬಾರಿಗೆ ತಮ್ಮ ಹೆಸರಿಡದ ಚಿತ್ರಕ್ಕೆ ಸುದೀಪ್ ಅವರನ್ನು ನಾಯಕನನ್ನಾಗಿ ಆರಿಸಿದ್ದಾರೆ. ಮೈಸೂರಿನಲ್ಲಿ ಐಪಿಎಸ್ ಶಂಕರ್ ಚಿತ್ರದಲ್ಲಿ ಶೂಟಿಂಗ್ ನಡೆಯುತ್ತಿರುವಾಗಲೇ ಇಂಥದ್ದೊಂದು ಅವಕಾಶ ಕ್ಯಾಥರೀನ್ಳನ್ನು ಹುಡುಕಿಕೊಂಡು ಗಾಂಧಿನಗರದಿಂದ ಮೈಸೂರಿಗೆ ತಲುಪಿದೆ.
ಎಸ್.ನಾರಾಯಣ್ ತಮಿಳಿನ ಸೂಪರ್ ಹಿಟ್ ಚಿತ್ರ ಸಾಮಿ ಯನ್ನು ಕ್ನಡಕ್ಕೆ ರಿಮೇಕ್ ಮಾಡುತ್ತಿದ್ದು, ಅದರಲ್ಲಿ ನಾಯಕನ ಪಾತ್ರಧಾರಿಯಾಗಿ ಸುದೀಪ್ ರಫ್ ಎಂಡ್ ರಫ್ ಪೋಲೀಸ್ ಅಧಿಕಾರಿಯಾಗಲಿದ್ದಾರೆ. ನಾಯಕಿಯಾಗಿ ಕ್ಯಾಥರಿನ್ಗೆ ಅದೃಷ್ಟ ಒಲಿದು ಬಂದಿದೆ. ಇನ್ನೇನು ಕಾಲ್ನೂ ಕನ್ನಡ ನೆಲದಲ್ಲಿ ಊರಿಯಾಗಿಲ್ಲ ಎನ್ನುವಾಗಲೇ ಎರಡು ದೊಡ್ಡ ಅವಕಾಶಗಳು ಸಿಕ್ಕರೆ ಯಾರಿಗೆ ಯಾತೇ ಖುಷಿಯಾಗಲ್ಲ ಹೇಳಿ..? ಅಂತೆಯೇ ಕ್ಯಾಥರಿನ್ಗೂ ಸಹಜವಾಗಿಯೇ ಖುಷಿಯಾಗಿದೆ.
ಮೈಸೂರಿನಿಂದಲೇ ಥ್ರಿಲ್ಲಾಗಿ ಕ್ಯಾಥರೀನ್ ತಾನೀಗ ನಟಿಸುತ್ತಿರುವ ಐಪಿಎಸ್ ಶಂಕರ್ನಲ್ಲಿ ತನಗೆ ಉತ್ತಮವಾದ ಪಾತ್ರವಿದೆ ಎಂದರು. ಖಂಡಿತವಾಗಿಯೂ ಐಪಿಎಸ್ ಶಂಕರ್ ತನಗೆ ಕನ್ನಡದಲ್ಲಿ ಇನ್ನೂ ಹಲವಾರು ಅವಕಾಶಗಳನ್ನೂ ತಂದುಕೊಡುವುದಲ್ಲದೇ, ತನ್ನ ಉತ್ತಮ ನಟನೆಗೆ ಇದು ವೇದಿಕೆಯೊದಗಿಸಲಿದೆ ಎಂದರು. ಆದರೆ ಅಪ್ಪಿತಪ್ಪಿಯೂ ಸುದೀಪ್ ಜತೆಗಿನ ಮುಂದಿನ ಚಿತ್ರದ ಬಗ್ಗೆ ಹೇಳಿಕೊಳ್ಳಲಿಲ್ಲ. ಅದಕ್ಕೆ ಕಾರಣವೂ ಇದೆ. ಎಸ್.ನಾರಾಯಣ್ ಚಿತ್ರದ ಬಗ್ಗೆ ಅಧಿಕೃತವಾಗಿ ತಾವೇ ಪ್ರಕಟಿಸುವ ಮುನ್ನ ಎಲ್ಲೂ ಬಾಯಿಬಿಡಬಾರದೆಂದು ಹೇಳಿದ್ದಾರೆ. ಹಾಗಾಗಿ ಕ್ಯಾಥರಿನ್ ಸಂತಸವನ್ನು ತನ್ನೊಳಗೇ ಅದುಮಿಟ್ಟುಕೊಂಡು ಐಪ್ಎಸ್ ಶಂಕರ್ ಚಿತ್ರದಲ್ಲಿ ನಾಯಕ ವಿಜಯ್ ಜತೆಗೆ ಬ್ಯುಸಿಯಾಗಿದ್ದಾರೆ.
ಐಪಿಎಸ್ ಶಂಕರ್ ಚಿತ್ರದಲ್ಲಿ ಈಜುಡುಗೆಯಲ್ಲೂ ಕಾಣಿಸಿಕೊಳ್ಳಲಿರುವ ಕ್ಯಾಥರಿನ್ಗೆ ಈಜುಡುಗೆ ಧರಿಸೋದು ದೊಡ್ಡ ವಿಷಯವೇ ಅಲ್ಲವಂತೆ. ಮಾಡೆಲ್ ಆಗಿರೋದ್ರಿಂದ ಇಂಥಾ ಡ್ರೆಸ್ಸುಗಳನ್ನೆಲ್ಲ ಧರಿಸಿ ಸಾಕಷ್ಟು ಅಭ್ಯಾಸವಿದೆ. ಹಾಗಾಗಿ ನನಗೆ ಮುಜುಗರವಿಲ್ಲ. ಅಲ್ಲದೆ ಈಜುಡುಗೆ ತುಂಬಾ ಕಾಮನ್. ಹಾಗಾಗಿ ಅಂಥಾ ಡ್ರೆಸ್ಸು ಹಾಕಲು ನನ್ನ ನಿಬಂಧನೆಗಳೇನಿಲ್ಲ. ನಾನು ರೆಡಿ ಎಂದಿದ್ದಾಳೆ. ಬಹುಶಃ ಈಕೆಗೆ ಇನ್ನೂ ಹೆಚ್ಚು ಸಿನಿಮಾಗಳ ಆಫರ್ ಬರಬಹುದು ಎನ್ನುತ್ತಾರೆ ಗಾಂಧಿನಗರ ಪಂಡಿತರು!