ಕನ್ನಡ ಚಿತ್ರರಂಗದಲ್ಲಿ ಕಡಿಮೆ ಅವಧಿಯಲ್ಲೇ ಕೀರ್ತಿಯ ಉತ್ತುಂಗಕ್ಕೇರಿದ ಮಳೆ ಹುಡುಗಿ ಪೂಜಾ ಗಾಂಧಿಯ ಕಾಲವೂ ಮುಗೀತು ಅಂತ ಗಾಂಧಿನನಗರದ ಪಂಡಿತರು ಲೆಕ್ಕಾಚಾರ ಹಾಕುತ್ತಾರೆ. ಅದಕ್ಕೆ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಆಕೆಯಿಂದ ಒಂದೇ ಒಂದು ಹಿಟ್ ಚಿತ್ರವೂ ಬರದಿರೋದು. ಕನ್ನಡ ನಟಿಯರೇ ಕನ್ನಡ ಮಾತನಾಡಲು ತೊಡರುತ್ತಿರುವಾಗ ಬಂದ ಈ ಹಿಂದಿ ಹುಡುಗಿ ಅಲ್ಪಕಾಲದಲ್ಲಿ ಕನ್ನಡ ಮಾತಾಡಿ ಪ್ರೀತಿ ತೋರಿಸಿದ್ದು, ಕಲಿಯುವ ಉತ್ಸಾಹ ಪ್ರದರ್ಶಿಸಿದ್ದೂ ಕೂಡಾ ಪೂಜಾ ಕನ್ನಡಿಗರ ಹೃದಯ ಕದಿಯಲು ಕಾರಣ ಎನ್ನಬಹುದೇನೋ.
ಏನೇ ಇರಲಿ. ಒಟ್ಟಾರೆ, ಪೂಜಾ ಸದ್ಯದಲ್ಲೇ ಮದುವೆಯಾಗ್ತಾರೆ ಅನ್ನೋ ಸುದ್ದಿಯಿದೆಯಲ್ಲಾ ಎಂದು ಆಕೆಯಲ್ಲೇ ನೇರವಾಗಿ ಕೇಳಿದರೆ, ಬಹುಶಃ ಕೆಲ ಮಂದಿಗೆ ನನ್ನ ಮದುವೆಯ ಬಗ್ಗೆ ನನಗಿಂತಲೂ ಹೆಚ್ಚು ಆಸಕ್ತಿಯಿದೆ ಅನಿಸುತ್ತೆ. ತಕ್ಷಣ ನನಗೆ ಮದುವೆಯಾಗೋ ಆಸಕ್ತಿಯಿಲ್ಲ. ಕೆಲಕಾಲ ಚಿತ್ರರಂಗದಲ್ಲಿದ್ದು ನಂತರ ಮದುವೆಯಾಗುತ್ತೇನೆ. ಕನ್ನಡ ಚಿತ್ರರಂಗ ನನಗೆ ಸಾಕಷ್ಟು ಪ್ರೀತಿ, ಅವಕಾಶ ಕೊಟ್ಟಿದೆ. ಅಷ್ಟು ಬೇಗ ಇಲ್ಲಿಂದ ಹೊರಟುಹೋಗಲು ಇಷ್ಟವಿಲ್ಲ ಎನ್ನುತ್ತಾರೆ ಪೂಜಾ.
'ಹೌದಾ, ನಿಮ್ಮ ಕಾಲ ಮುಗೀತೆಂದು ಗಾಸಿಪ್ಪುಗಳಿವೆ?' ಎಂದು ಮರು ಪ್ರಶ್ನೆ ಹಾಕಿದರೆ ಆಕೆ, ಅಷ್ಟೇ ನೇರವಾಗಿ, ನಿಮ್ಮ ಪ್ರಶ್ನೆಗೆ ಉತ್ತರ ನಿಮ್ಮಲ್ಲೇ ಇದೆ. ಗಾಸಿಪ್ಪುಗಳು ಗಾಸಿಪ್ಪುಗಳಷ್ಟೆ. ಅವುಗಳಲ್ಲಿ ನಿಜಾಂಶ ಕಮ್ಮಿಯೇ. ನಾನು ಯಾವಾಗಲೂ ಸೋಲನ್ನು ಸವಾಲಾಗಿ ತೆಗೆದುಕೊಳ್ಳುತ್ತೇನೆ. ಅಷ್ಟೇ ಅಲ್ಲ, ಸೋಲನ್ನು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶವಾಗಿ ಪರಿಗಣಿಸುತ್ತೇನೆ. ಇದರಿಂದಾಗಿಯೇ ನಾವು ನಮ್ಮ ದೊಡ್ಡ ಗುರಿಗಳಲ್ಲಿ ಸಫಲವಾಗಬಹುದು ಎಂಬುದು ನನ್ನ ನಂಬಿಕೆ. ಜೀವನ ಎಂಬುದೊಂದು ಪವಾಡ. ಅದರಲ್ಲಿ ಸೋಲು, ಗೆಲುವು ಎಲ್ಲವೂ ಕೇವಲ ಒಂದು ಭಾಗ ಅಷ್ಟೆ ಎನ್ನುತ್ತಾಳೆ ದಿಟ್ಟೆ ಪೂಜಾ.
ಹಿಂದೆ ಮುಂದೆ ಯೋಚಿಸದೆ ಸಿಕ್ಕಾಪಟ್ಟೆ ಸಿನಿಮಾಗಳಿಗೆಲ್ಲ ಸಹಿ ಹಾಕುತ್ತೀರಂತಲ್ಲಾ, ಯಾಕೆ ಎಂದರೆ ಅದಕ್ಕೂ ಈಕೆಯ ಬಳಿ ಸಿದ್ಧ ಉತ್ತರವಿದೆ. ನನಗೀಗ ಪ್ರಾಯೋಗಿಕ ಘಳಿಕೆ. ಈಗ ನಾನು ಅನು, ಇನಿಯ, ಹುಚ್ಚಿ, ನಿನಗಾಗಿ ಕಾದಿರುವೆ ಮುಂತಾದ ಸಿನಿಮಾಗಳಿಗೆಲ್ಲ ಸಹಿ ಹಾಕಿದ್ದು ಯಾಕೆಂದರೆ ಎಂತಹ ಪಾತ್ರ ನನಗೊಪ್ಪುತ್ತೆ ಎಂಬುದಕ್ಕೋಸ್ಕರ. ನಿಜಕ್ಕೂ ಈ ಎಲ್ಲ ಚಿತ್ರಗಳಲ್ಲಿ ನನ್ನ ನಟನೆಯ ದೃಷ್ಟಿಯಿಂದ ಹೇಳೋದಾದ್ರೆ ನಾನು ಉತ್ತಮವಾಗಿಯೇ ನಟಿಸಿದ್ದೇನೆ.