ಖ್ಯಾತ ಹಾಸ್ಯಲೇಖಕ ಎಂ.ಎಸ್.ನರಸಿಂಹಮೂರ್ತಿಯವರು ಎಂಎಸ್ಎನ್ ಎಂದೇ ಚಿರಪರಿಚಿತರು. ಬ್ಯಾಂಕ್ ಒಂದರಲ್ಲಿ ಅಧಿಕಾರಿಯಾಗಿದ್ದ ಇವರನ್ನು ಹಾಸ್ಯಲೇಖನಗಳ ಮೂಲಕ ಹೆಚ್ಚಿನ ಮಟ್ಟದಲ್ಲಿ ಬೆಳಕಿಗೆ ತಂದಿದ್ದು ತರಂಗ ವಾರಪತ್ರಿಕೆಯೇ ಎನ್ನಬೇಕು.
ಅಲ್ಲಿಂದ ಮುಂದಕ್ಕೆ ಕೇವಲ ಹಾಸ್ಯಲೇಖನಗಳ ಮೂಲಕ ಜನಮೆಚ್ಚುಗೆ ಪಡೆದಿದ್ದ ಎಂಎಸ್ಎನ್ ಕಾಲಕ್ರಮೇಣ ಕಿರುತೆರೆಯ ತಂತ್ರಜ್ಞರ ಹಾಗೂ ಕಲಾವಿದರ ಡಾರ್ಲಿಂಗ್ ಆಗಿಹೋದರು. ಯಾವುದಾದರೂ ಹಾಸ್ಯ ಸನ್ನಿವೇಶಕ್ಕೆ ಸಂಭಾಷಣೆ ಬರೆಯಬೇಕೆಂದೋ ಅಥವಾ ಹಾಸ್ಯ ಸಂಬಂಧಿ ಕಾರ್ಯಕ್ರಮ ನಡೆಸಬೇಕೆಂದೋ ಅನಿಸಿದರೆ, 'ಎಂಎಸ್ಎನ್ ಅವರನ್ನ ಕರೆಸ್ರೀ' ಎಂದು ಹೇಳುವಷ್ಟರ ಮಟ್ಟಿಗೆ ಅವರ ಅಗತ್ಯ- ಅನಿವಾರ್ಯತೆ- ಜನಪ್ರಿಯತೆ ಬೆಳೆಯಿತು.
ಇದು ಸುಮ್ಮನೇ ಉಪಚಾರಕ್ಕೆ ಹೇಳುತ್ತಿರುವ ಮಾತಲ್ಲ. ಅವರ ಲೇಖನಿಯಿಂದ ಸೃಷ್ಟಿಯಾದ ಪಾತ್ರಗಳು, ಅವುಗಳ ಸಂಭಾಷಣೆಗಳು ಇದನ್ನು ಸಾರಿ ಹೇಳುತ್ತವೆ. ಸಿಲ್ಲಿ- ಲಲ್ಲಿ, ಪಾಪ ಪಾಂಡು, ಪಾಯಿಂಟ್ ಪರಿಮಳ, ಕ್ರೇಜಿ ಕರ್ನಲ್, ಪಾರ್ವತಿ ಪರಮೇಶ್ವರ ಹೀಗೆ ಒಂದಕ್ಕಿಂತಾ ಒಂದು ಧಾರಾವಾಹಿಗಳು ಅವರ ಸಾಧನೆಯ ಹಾದಿಯನ್ನು ನಿಚ್ಚಳವಾಗಿ ತೋರಿಸುತ್ತವೆ.
ಇಂಥಾ ಅನನ್ಯ ಪ್ರತಿಭೆಯ ಎಂಎಸ್ಎನ್ ಅವರಿಗೆ ಈಗ ಅರವತ್ತು ತುಂಬಿದೆ. ಈ ನೆನಪಿಗೆಂದು ಅವರ ಬಳಗದವರು ಷಷ್ಠ್ಯಬ್ಧಿ ಸಮಾರಂಭವನ್ನು ಏರ್ಪಡಿಸಿದ್ದರು. ಸಿಹಿಕಹಿ ಚಂದ್ರುರವರ ಫೈನಲ್ ಕಟ್ ಪ್ರೊಡಕ್ಷನ್ನೊಂದಿಗೆ ಮೊದಲಿನಿಂದಲೂ ಅವರು ಗುರುತಿಸಿಕೊಂಡಿರುವುದಕ್ಕೋ ಏನೋ ಸಿಹಿಕಹಿ ಚಂದ್ರುರವರ ನೇತೃತ್ವದಲ್ಲೇ ಈ ಪುಟ್ಟ ಸಮಾರಂಭ ಏರ್ಪಾಡಾಗಿತ್ತು. ಸಿಹಿಕಹಿ ಗೀತಾ, ಜಹಾಂಗೀರ್, ಮಂಜುನಾಥ್ ಜಂಬೆ, ಜ್ಯೋತಿ ಆರ್ಯ, ಮೇಘಶ್ರೀ ಭಾಗವತರ್ ಇವರೇ ಮೊದಲಾದ ಕಲಾವಿದರು ಎಂಎಸ್ಎನ್ ಅವರನ್ನು ಅಭಿನಂದಿಸಿದರು.