ಮಹತ್ವಾಕಾಂಕ್ಷೀ ನಿರ್ಮಾಪಕ ಎನ್.ಎಂ.ಸುರೇಶ್ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ತಮ್ಮ ನಿರ್ಮಾಣದ 'ಚೆಲುವೆಯೇ ನಿನ್ನ ನೋಡಲು' ಚಿತ್ರದಲ್ಲಿ ಪ್ರಪಂಚದ 7 ಅದ್ಬುತಗಳನ್ನು ಕನ್ನಡಿಗರಿಗೆ ತೋರಿಸಬೇಕೆಂಬ ಮಹದಾಸೆ ಅವರದು. ಈ ನಿಟ್ಟಿನಲ್ಲಿ 7 ರಾಷ್ಟ್ತ್ರಗಳನ್ನು ಸುತ್ತಿಬಂದಿದ್ದಾರೆ.
ಚಿತ್ರದ ಕಥೆಗೆ ಬೇಕಾದ ಅಗತ್ಯ ಅಂಶಗಳನ್ನೆಲ್ಲಾ ಹೀಗೆ ನೀಡುತ್ತಿರುವುದರಿಂದಲೇ ಇದು ಕನ್ನಡ ಚಿತ್ರರಂಗದಲ್ಲೇ ಅಪಾರ ವೆಚ್ಚದ ಚಿತ್ರವಾಗಲಿದೆ ಎಂಬುದು ಅವರ ಸಮರ್ಥನೆ. ಶಿವರಾಜ್ ಕುಮಾರ್ ನಾಯಕರಾಗಿರುವ ಈ ಚಿತ್ರದ ನಿರ್ದೇಶಕರು ರಘುರಾಮ್. ಅವರು ಈ ಹಿಂದೆ 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದಲ್ಲಿ ನಟ-ನಿರ್ದೇಶಕ ಪ್ರೇಮ್ ಅವರ ಗೆಳೆಯನ ಪಾತ್ರದಲ್ಲಿ ಗಮನಾರ್ಹ ಅಭಿನಯ ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಶಿವಣ್ಣನಿಗೆ ಈ ಚಿತ್ರದಲ್ಲಿ ಪ್ರವಾಸಿ ಗೈಡ್ ಪಾತ್ರವಿದ್ದು, ನಾಯಕಿಯರಾಗಿ ಕನ್ನಡದ ಬೆಡಗಿ ಹರಿಪ್ರಿಯಾ ಹಾಗೂ ಮುಂಬೈ ಸೊಬಗಿ ಸೊನಾಲಿ ಚೌಹಾಣ್ ನಟಿಸಿದ್ದಾರೆ. ಈಗಾಗಲೇ ಶೇಕಡ 95 ಭಾಗ ಚಿತ್ರೀಕರಣ ಮುಗಿದಿದ್ದು, ಇನ್ನೆರಡು ದಿನಗಳ ಚಿತ್ರೀಕರಣ ಬಾಕಿಯಿದೆಯಂತೆ.
ಚಿತ್ರದ ರೀರೆಕಾರ್ಡಿಂಗ್ ಕಾರ್ಯ ಪ್ರಸಾದ್ ಸ್ಟುಡಿಯೋದಲ್ಲಿ ಪೂರ್ಣಗೊಂಡಿದೆ. ಕಬೀರ್ ಲಾಲ್ ಛಾಯಾಗ್ರಹಣ, ಹರಿಕೃಷ್ಣರ ಸಂಗೀತ, ಇಮ್ರಾನ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರ ಸದ್ಯದಲ್ಲಿಯೇ ಬೆಳ್ಳಿತೆರೆಯ ಮೇಲೆ ಮೂಡಲಿದೆ.