ಚೆಲುವಿನ ಚಿತ್ತಾರದ ಮೂಲಕ ಯುವ ಹೈದರ ಹೃದಯದಲ್ಲಿ ಚಿತ್ತಾರ ಬರೆದ ಮುದ್ದು ಮುಖದ ಚೆಲುವೆ ಅಮೂಲ್ಯ ಇನ್ನೂ ತಮ್ಮ ತಂದೆಯನ್ನು ಕಳೆದುಕೊಂಡ ನೋವಿನಿಂದ ಹೊರಬಂದಿಲ್ಲ. ಅಮೂಲ್ಯಳ ಮೂರನೇ ಚಿತ್ರ ಪ್ರೇಮಿಸಂ ಬಿಡುಗಡೆಯಾಗುವ ಮೊದಲೇ ಬ್ಯುಸಿನೆಸ್ಮನ್ ಆಗಿದ್ದ ತಂದೆ ಇಹಲೋಕ ತ್ಯಜಿಸಿದ್ದರು. ಇನ್ನೂ ಪಿಯುಸಿ ಮೆಟ್ಟಿಲು ಹತ್ತಿರುವ ಈ ಹದಿಹರೆಯದ ಜಾಣೆ ತನ್ನ ಪ್ರತಿ ಸಿನಿಮಾ ನಿರ್ಧಾರಗಳಿಗೂ ಅಪ್ಪ-ಅಮ್ಮನನ್ನು ಅವಲಂಬಿಸಿದ್ದಳು. ಈಗ ಅಮೂಲ್ಯ ಪಾಲಿಗಿರೋದು ಅಮ್ಮ ಹಾಗೂ ಅಣ್ಣ.
ಇತ್ತೀಚೆಗೆ ಪ್ರೇಮಿಸಂ ಚಿತ್ರೀಕರಣಕ್ಕಾಗಿ ಚೀನಾಕ್ಕೆ ತೆರಳಬೇಕಿತ್ತು. ಅಪ್ಪನ ಸಾವಿನಿಂದ ಹೋಗಲಾಗಲಿಲ್ಲ. ಪ್ರೇಮಿಸಂ ಚಿತ್ರ ನಾನು ಈವರೆಗೆ ಮಾಡಿದ ಸಿನಿಮಾಗಳಲ್ಲಿ ಸ್ವಲ್ಪ ಕಷ್ಟಕರವೆನಿಸಿದ ಚಿತ್ರ. ನನ್ನ ಶಕ್ತಿ ಮೀರಿ ಈ ಚಿತ್ರದಲ್ಲಿ ನಟಿಸಿದ್ದೇನೆ. ಅದು ಬಿಡುಗಡೆಯಾಗುವ ಮುನ್ನವೇ ಅಪ್ಪ ನಮ್ಮನ್ನು ಬಿಟ್ಟುಹೋದ್ರು ಎನ್ನುವಾಗ ಅಮೂಲ್ಯಳ ಕಣ್ಣು ಹನಿಗೂಡುತ್ತದೆ.
ಪ್ರೇಮಿಸಂ ಚಿತ್ರದ ಶೂಟಿಂಗ್ಗಾಗಿ ಒಂದು ತಿಂಗಳು ಕಾಲೇಜಿಗೆ ಚಕ್ಕರ್ ಕೂಡಾ ಹಾಕಿದ್ದಾಳೆ ಅಮೂಲ್ಯ. ಶೇಷಾದ್ರಿಪುರದ ಮನೆಯಿಂದ ಮಲ್ಲೇಶ್ವರದ ನಿರ್ಮಲಾ ರಾಣಿ ಶಾಲೆಗೆ ಹೈಸ್ಕೂಲಿಗೆ ಹೋಗುವ ದಿನಗಳಲ್ಲೇ ಈಕೆ ಚೆಲುವಿನ ಚಿತ್ತಾರದಲ್ಲಿ ನಾಯಕಿಯಾದಳು. ಈಗ ಮೌಂಟ್ ಕಾರ್ಮೆಲ್ ಕಾಲೇಜು ಮೆಟ್ಟಿಲು ಹತ್ತಿದ್ದಾಳೆ.
ಚಿತ್ರರಂಗದಲ್ಲಿ ಉತ್ತಮ ಹೆಸರು ಸಂಪಾದಿಸಬೇಕೆಂಬ ಆಸೆ ಅಮೂಲ್ಯಳದು. 'ನಟಿ ಸೌಂದರ್ಯಾ ಇದ್ದರಲ್ಲ, ಹಾಗಾಗಬೇಕು ನಾನು' ಎಂದು ಮುಗ್ಧವಾಗಿ ತನ್ನ ಬಯಕೆ ಹಂಚುತ್ತಾಳೆ ಈ ಬೆಡಗಿ. ಚೆಲುವಿನ ಚಿತ್ತಾರ ಹೆಸರು ಗಳಿಸಿದಾಗಲೇ ತೆಲುಗು, ತಮಿಳಿನಿಂದ ಸಾಕಷ್ಟು ಆಫರ್ ಬಂದರೂ ಹೋಗದೆ ಕನ್ನಡದಲ್ಲಿ ಉಳಿದಿದ್ದಾಳೆ ಈಕೆ.
'ಚೆಲುವಿನ ಚಿತ್ತಾರ' ಚಿತ್ರದಲ್ಲಿ ನಾಯಕಿ ಪಟ್ಟ ನೀಡಿದ ನಿರ್ದೇಶಕ ಎಸ್.ನಾರಾಯಣ್ ನಿಧಾನವಾಗಿ ತನ್ನ ಸಂಪರ್ಕ ಕಡಿದುಕೊಳ್ಳುತ್ತಿರುವ ಬಗ್ಗೆಯೂ ಅಮೂಲ್ಯ ಕೊಂಚ ನೊಂದುಕೊಂಡಿದ್ದಾರೆ. ಅವರು ಏನು ಮಾಡಿದರೂ ನನಗೆ ಬೇಸರವಿಲ್ಲ. ಅವರ ಬಗ್ಗೆ ಮುಂಚೆ ಇದ್ದಷ್ಟೇ ಗೌರವ ಇಂದಿಗೂ ಇದೆ. ನನ್ನ ಅಪ್ಪ ತೀರಿಕೊಂಡಾಗಲೂ ಅವರು ಬರಲಿಲ್ಲ. ಮನೆಗೆ ಫೋನ್ ಮಾಡಿದರೆ ಅವರಿಲ್ಲ ಎಂದು ಸುಳ್ಳು ಹೇಳುತ್ತಾರೆ. ನಮ್ಮ ಮಧ್ಯೆ ಯಾವುದೇ ಕೆಟ್ಟ ಘಟನೆ ನಡೆದಿಲ್ಲ. ಆದರೂ ಅವರು ಯಾಕೆ ಮಾತನಾಡುತ್ತಿಲ್ಲವೋ ನನಗೊತ್ತಿಲ್ಲ. ಅವರ ಜತೆ ಸಂಪರ್ಕವೂ ಇಲ್ಲ ಎಂದು ಕಣ್ಣಂಚಿನಲ್ಲಿ ಕಂಡೂ ಕಾಣದ ಹನಿಯೊಂದಿಗೆ ಮಾತು ಮುಗಿಸುತ್ತಾರೆ ಅಮೂಲ್ಯ.