ಇದೀಗ ಗಾಂಧಿನಗರದಿಂದ ಕೇಳಿಬರುತ್ತಿರುವ ಬಿಸಿ ಬಿಸಿ ಸುದ್ದಿ ಏನಪ್ಪಾ ಅಂದ್ರೆ, ಮತ್ತೆ ಮುಂಗಾರು ಶುರುವಾಗಿದೆಯಂತೆ. ಇದೇನಪ್ಪಾ ಗಾಂದಿನಗರದಲ್ಲಿ ಮಳೆ ವರದಿ ಹೇಳೊದಿಕ್ಕೆ ಶುರುಮಾಡಿಬಿಟ್ಟರಾ ಅಂದುಕೊಳ್ಳಬೇಡಿ. ಯಶಸ್ವೀ ಚಿತ್ರ ಮುಂಗಾರು ಮಳೆಯ ಸರದಾರ ಇ.ಕೃಷ್ಣಪ್ಪ ಹೊಸ ಚಿತ್ರವೂಂದಕ್ಕೆ ಸ್ಕೆಚ್ ಹಾಕಿದ್ದಾರೆ. ಚಿತ್ರದ ಹೆಸರೇ 'ಮತ್ತೆ ಮುಂಗಾರು'.
ಕೆಲವು ಅಭಿಮಾನಿಗಳಿಗೆ ಸ್ವಲ್ಪ ಹೆಚ್ಚೇ ಪ್ರಾಣದಂತಿರುವ ನಟ ಶ್ರೀನಗರ ಕಿಟ್ಟಿ ಈ ಚಿತ್ರದ ನಾಯಕ. ಮೀನಿನ ಕಂಗಳ ಬೆಡಗಿ ಮುಂಬೈನ ರಚನಾ, ಕಿಟ್ಟಿಗೆ ಜೋಡಿಯಾಗಲಿದ್ದಾಳೆ. ದ್ವಾರ್ಕಿ ನಿರ್ದೇಶನದ ಸಾರಥ್ಯ ವಹಿಸಲಿದ್ದಾರೆ.
IFM
ದ್ವಾರ್ಕಿ ಮತ್ತು ಕಿಟ್ಟಿ ಒಟ್ಟಾಗಿ ಈ ಹಿಂದೆ ಬೈಟು ಹೆಸರಿನ ಚಿತ್ರವನ್ನು ತಮಿಳು ಮಂದಿಗೆ ನೀಡಿದ್ದರು. ಅದು ಅವರ ರುಚಿಗೆ ತಕ್ಕಮಟ್ಟದ್ದಾಗಿರಲಿಲ್ಲ ಅಂತ ಕಾಣುತ್ತೆ. ಬೈಟು ಬೇಡವೇ ಬೇಡ ಅಂದು ಬಿಟ್ಟರು. ಮತ್ತೊಮ್ಮೆ ಕಿಟ್ಟಿ ಅತ್ತ ತಲೆ ಕೂಡಾ ಹಾಕಿ ಮಲಗಲಿಲ್ಲ.
ಮರಳಿ ಯತ್ನವ ಮಾಡು ಎಂಬಂತೆ ಕೃಷ್ಣಪ್ಪನವರ ಆಶೀರ್ವಾದದೊಂದಿಗೆ ಮತ್ತೆ ಮುಂಗಾರು ಚಿತ್ರದ ಮೂಲಕ ತಮ್ಮ ಕೌಶಲ್ಯ ಪ್ರದರ್ಶನಕ್ಕೆ ಸಿದ್ಧರಾಗಿದ್ದಾರೆ. ಈ ಚಿತ್ರ ಭಾರಿ ಬ್ರೇಕ್ ನೀಡುತ್ತೆ ಅನ್ನೋದು ಕಿಟ್ಟಿಯ ನಂಬಿಕೆ. ಇದೇ ತಿಂಗಳ 27ರಿಂದ ಚಿತ್ರೀಕರಣ ಪ್ರಾರಂಭ.
ತೀರ್ಥಹಳ್ಳಿಯ ಹುಡುಗ ಮುಂಬೈಗೆ ಕೆಲಸ ಹುಡುಕಿಕೊಂಡು ಹೋಗುತ್ತಾನೆ. ಅವನಿಗೆ ಅಲ್ಲಿ ಎದುರಾಗುವ ಘಟನೆಗಳೇ ಚಿತ್ರದ ಪ್ರಮುಖ ಸಾರ ಎನ್ನುತ್ತದೆ ಚಿತ್ರತಂಡ. ಇದು ಮತ್ತೆ ಚಿತ್ರರಂಗದಲ್ಲಿ ಮುಂಗಾರು ಸುರಿಸುತ್ತೋ, ನೆರೆಯನ್ನೇ ಸೃಷ್ಟಿಸುತ್ತೋ, ಅಥವಾ ಮೋಡ ಮಾತ್ರ ಸಾಗಿ ಮಳೆಯೇ ಸುರಿಸದೆ ಬರಗಾರವಾಗುತ್ತೋ... ಕಾಯಬೇಕು. ಕಾಲವೇ ಉತ್ತರ ಹೇಳಲಿದೆ.