ಇತ್ತೀಚಿನ ದಿನಗಳಲ್ಲಿ ಗಾಂಧಿನಗರದ ಕಡೆ ಸಿಕ್ಕಾಪಟ್ಟೆ ಹೊಸಬರು. ಇದು ಯಾವ ಮಟ್ಟಕ್ಕೆ ಬೆಳೆದುಬಿಟ್ಟಿದೆ ಅಂದರೆ ನಾಯಕ, ನಾಯಕಿ, ಪೋಷಕ ನಟರಿಂದ ಹಿಡಿದು ನಿರ್ದೇಶಕನ ವರೆಗೂ ಹೊಸಬರೇ! ಇದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ನಿರ್ಮಾಪಕರುಗಳ ಆಗಮನ ಕನ್ನಡ ಚಿತ್ರರಂಗಕ್ಕಾಗುತ್ತಿದೆ.
ಹೊಸಬರ ಪೈಕಿ ನಿರ್ಮಾಪಕ ರಾಮಸ್ವಾಮಿ ಕೂಡಾ ಒಬ್ಬರು. ಅವರ ಚೊಚ್ಚಲ ನಿರ್ಮಾಣದ ಚಿತ್ರ ವರ್ಷಧಾರೆ. ವರ್ಷಾನುಗಟ್ಟಲೆಯಿಂದ ಕಾದು ಅವರು ಇದೀಗ ವರ್ಷಧಾರೆಗೆ ಅಂತಿಮ ಹಾಡುತ್ತಿದ್ದಾರೆ.
ರೈತರಾದ ರಾಮಸ್ವಾಮಿ ಒಂದಾನೊಂದು ಕಾಲದಲ್ಲಿ ಸರ್ಕಾರಿ ನೌಕರರಾಗಿದ್ದರು. ಚಿತ್ರ ಮಾಡಬೇಕು, ಮಾಡಿದರೂ ಜನರು ಮೆಚ್ಚುವಂತಿರಬೇಕು ಎಂದು ಅವರು ವರ್ಷಧಾರೆಗೆ ಕೈ ಹಾಕಿದ್ದು. ಸಮಾಜದಲ್ಲಿನ ಹಲವು ಸಮಸ್ಯೆಗಳನ್ನು ಇಟ್ಟುಕೊಂಡು ಚಿತ್ರ ಮಾಡಿದ್ದೇನೆ ಎನ್ನುತ್ತಾರೆ ರಾಮಸ್ವಾಮಿ.
ನಾಯಕ ಮಿಥುನ್, ನಾಯಕಿ ಪಾಯಲ್ ಘೋಷ್, ಸೂರಜ್ ತಮ್ಮ ಪಾತ್ರಗಳನ್ನು ಉತ್ತಮವಾಗಿ ನಿಭಾಯಿಸಿದ್ದಾರೆ ಎನ್ನುತ್ತಾರೆ ನಿರ್ದೇಶಕ ವೇಮಗಲ್ ಜಗನ್ನಾಥ್ ರಾವ್.