ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಪಾಳಕ್ಕೆ ಹೊಡೆದ ನಾಗತಿಹಳ್ಳಿ: ಐಂದ್ರಿತಾ ರೇ ಅಳಲು (Aindrita Ray | Kannada Film | Nagatihalli Chandrashekhar | Nooru Janumakoo)
'ನೂರು ಜನುಮಕೂ' ಚಿತ್ರದ ಚಿತ್ರೀಕರಣ ವೇಳೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ನಾಯಕಿ ನಟಿ ಐಂದ್ರಿತಾ ರೇಗೆ ಕಪಾಳ ಮೋಕ್ಷ ನಡೆಸಿರುವುದು ಕನ್ನಡ ಚಿತ್ರರಂಗದಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಇದೇ ಸಂದರ್ಭ, ಚಿತ್ರದ ಹೊಸ ನಾಯಕನ ನಟ ಸಂತೋಷ್ ಮೇಲೂ ಹಲ್ಲೆ ನಡೆಸಲಾಗಿರುವ ಸಂಗತಿಯನ್ನು ಟಿವಿ-9 ವಾಹಿನಿ ಬಯಲು ಮಾಡಿದೆ.
ಈ ಕುರಿತು ಟಿವಿ-9ಗೆ ವಿವರ ನೀಡಿರುವ ನಟಿ ಬೆರಗು ಕಂಗಳ ಚೆಲುವೆ ಐಂದ್ರಿತಾ, ಚಿತ್ರರಂಗದಲ್ಲಿ ನಾಗತಿಹಳ್ಳಿ ಅವರನ್ನು ಎಲ್ಲರೂ ಮೇಷ್ಟು ಅಂತ ಕರೀತಾರೆ, ಅದೇಕೆಂಬುದೇ ತಿಳೀತಿಲ್ಲ. ಅದಕ್ಕೆ ಅವರು ಯೋಗ್ಯರೂ ಅಲ್ಲ. ಎರಡು ಬಾರಿ ತಾಯಿಯ ಎದುರೇ ನನಗೆ ಕಪಾಳ ಮೋಕ್ಷ ಮಾಡಿದರು. ಇದರಿಂದ ಎಡಕಿವಿಯಲ್ಲಿ ರಕ್ತವೂ ಬಂದಿದ್ದು, ಆ ಕಿವಿಯ ಶ್ರವಣ ಶಕ್ತಿಗೂ ಹಾನಿಯಾಗಿದೆ ಎಂದು ವಿವರಿಸಿದ್ದಾರೆ.
ಡಿಸೆಂಬರ್ 6ರಂದು ಹಾಂಕಾಂಗ್ನಲ್ಲಿ ಶೂಟಿಂಗ್ ಸಂದರ್ಭ ಈ ಘಟನೆ ನಡೆದಿದೆ. ಈ ಕುರಿತು ಚಿತ್ರ ಕಲಾವಿದರ ಸಂಘ ಹಾಗೂ ನಿರ್ಮಾಪಕರ ಸಂಘಕ್ಕೆ ದೂರು ನೀಡಿರುವುದಾಗಿ ಮೂಲತಃ ಬಂಗಾಳಿಯಾದರೂ, ಲೀಲಾಜಾಲವಾಗಿ ಕನ್ನಡ ಮಾತನಾಡುವ ನಟಿ ಐಂದ್ರಿತಾ ತಿಳಿಸಿದ್ದಾರೆ. 'ಜಂಗ್ಲಿ'ಯಲ್ಲಿ ಬಿಚ್ಚಮ್ಮನಾಗಿ ಮೈದೋರಿದರೂ 'ಮನಸಾರೆ'ಯಲ್ಲಿ ಕಣ್ಣಿನಿಂದಲೇ ಮಾತಾಡಿ ಕನ್ನಡಿಗರ ಮನಗೆದ್ದ ನಟಿ ಈಕೆ.
ನಾಗತಿಹಳ್ಳಿಯವರು ಯಾಕೆ ಹೀಗೆ ಮಾಡಿದರೋ ಗೊತ್ತಾಗ್ತಾ ಇಲ್ಲ. ಅವರು ಇರುವ ಗೌರವವನ್ನೆಲ್ಲಾ ಕಳೆದುಕೊಂಡಿದ್ದಾರೆ. 'ನಾನು ಸೀನಿಯರ್ ಡೈರೆಕ್ಟರ್, ನೀನೋ ಹೊಸಬಳು, ನಂಗೆ ಎಲ್ರ ಸಪೋರ್ಟ್ ಇದೆ, ನಿನ್ನಿಂದ ಏನೂ ಮಾಡಕ್ಕಾಗಲ್ಲ' ಎಂದು ನಾಗತಿಹಳ್ಳಿ ನುಡಿದಿರುವುದಾಗಿಯೂ ಐಂದ್ರಿತಾ ಕಣ್ಣೀರು ಸುರಿಸುತ್ತಾ ಹೇಳಿದ್ದಾಳೆ.
ಚಿತ್ರೀಕರಣಕ್ಕೆ ತಾಯಿಯನ್ನು ಜೊತೆಯಲ್ಲಿ ಕರೆದೊಯ್ದಿರುವ ಬಗ್ಗೆಯೂ ಅವರಿಗೆ ಅಸಮಾಧಾನವಿತ್ತು. ನಿರ್ಮಾಪಕರು ಒಳ್ಳೆಯವರಾಗಿರುವುದರಿಂದ ಈ ಚಿತ್ರ ಪೂರ್ಣಗೊಳಿಸಲು ಒಪ್ಪಿದ್ದೇನೆ. ಇದೀಗ ಕಲಾವಿದರ ಸಂಘಕ್ಕೆ ಮತ್ತು ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದೇನೆ. ಮುಂದೇನಾಗುತ್ತದೆ ಕಾದು ನೋಡಬೇಕು ಎಂದು ಐಂದ್ರಿತಾ ತಿಳಿಸಿದ್ದಾರೆ.