''ಕಾಲು ಒದ್ದೆಯಾಗದೆ ಸಮುದ್ರ ದಾಟಬಹುದು. ಆದ್ರೆ ಕಣ್ಣು ಒದ್ದೆಯಾಗದೆ ಜೀವನ ದಾಟೋಕ್ಕಾಗಲ್ಲ.'' ಇದು ಶಿವರಾಜ್ ಕುಮಾರ್ ಅಭಿನಯದ ಸುಗ್ರೀವ ಚಿತ್ರದ ಡೈಲಾಗ್. ಸುಗ್ರೀವ ಚಿತ್ರದ ಡೈಲಾಗ್ಗಳೇ ಹೀಗೆ. ಹಾಗಾಗಿ ಸುಗ್ರೀವ ಚಿತ್ರವನ್ನು ಇದೇ ಡೈಲಾಗುಗಳೇ ಮುನ್ನೆಡೆಸಿಕೊಂಡು ಹೋಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎನ್ನುತ್ತಾರೆ ಗಾಂಧಿನಗರದ ಅನುಭವಿಗಳು. ಯಾಕೆಂದರೆ ಈ ಡೈಲಾಗುಗಳ ಬ್ರಹ್ಮ ಅರ್ಥಾತ್ ಸೃಷ್ಟಿಕರ್ತ ರಾಮ್ ನಾರಾಯಣ್.
18 ಗಂಟೆಗಳಲ್ಲಿ ಚಿತ್ರೀಕರಣ ಮಾಡಿ ಕನ್ನಡದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸುಗ್ರೀವ ಚಿತ್ರಕ್ಕೆ ಸಂಭಾಷಣೆ ಬರೆದದ್ದು ರಾಮ್ ನಾರಾಯಣ್. ಇದೀಗ ಎಲ್ಲೆಲ್ಲೂ ಅವರದೇ ಮಾತು. ಮೊದಲು ರಾಮ್ ನಾರಾಯಣ್ ಸಚ್ಚಿ ಚಿತ್ರಕ್ಕೆ ಹಾಡುಗಳನ್ನು ಬರೆಯುವುದರ ಮೂಲಕ ಚಿತ್ರ ಜಗತ್ತಿಗೆ ಪಾದಾರ್ಪಣೆ ಮಾಡಿದರು.
ಅಂದು ಉಪೇಂದ್ರ ಅವರು ಬುದ್ಧಿವಂತ ಚಿತ್ರದಲ್ಲಿ ಡೈಲಾಗ್ ಮೇಲೆ ಡೈಲಾಗ್ ಉದುರಿಸಿದಾಗ ಪ್ರೇಕ್ಷಕರು ವಾರೆವಾಹ್ವ್ ಎಂದು ಚಪ್ಪಾಳೆ ತಟ್ಟಿ, ಸೀಟಿ ಹೊಡೆದಿರಬಹುದು. ಆದರೆ ಅಂದು ಆ ಉಪೇಂದ್ರರ ಡೈಲಾಗ್ ಹಿಂದಿರುದ್ದವರು ಇದೇ ರಾಮ್ ನಾರಾಯಣ್. ಬುದ್ದಿವಂತ ಚಿತ್ರಕ್ಕೆ ಸಂಭಾಷಣೆ ಬರೆದವರೇ ಈ ರಾಮ್ ನಾರಾಯಣ್. ಬುದ್ಧಿವಂತದ ನಂತರ ಹಲವು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವಂತೆ. ಇದೀಗ ಬಿಡುವಿಲ್ಲದಷ್ಟು ಕೆಲಸ ರಾಮ್ ಅವರ ಹೆಗಲಮೇಲಿದೆ. ಅಂದ ಹಾಗೆ ರಾಮ್ನಾರಾಯಣ್ ಸಂಭಾಷಣೆಯೊಂದಿಗೆ ಗೀತೆಗಳನ್ನು ರಚಿಸುವಂತಹ ಅಪರೂಪದ ಕಲಾಕಾರ. ರಾಮ್ ನಾರಾಯಣ್ ಕೈಯಿಂದ ಇನ್ನಷ್ಟು ಡೈಲಾಗುಗಳು ಹರಿದುಬರಲಿ ಎಂದು ಹಾರೈಸೋಣ. ಅಂದಹಾಗೆ, ಸುಗ್ರೀವ ಚಿತ್ರ ಸದ್ಯದಲ್ಲೇ ಹೊರಬರಲಿದ್ದು, ಬಿಡುಗಡೆಗೆ ಸಿದ್ಧವಾಗಿದೆ.