ಪಾರ್ವತಮ್ಮ ರಾಜ್ ಕುಮಾರ್ ಮದ್ರಾಸಿನಲ್ಲಿ ನೆಲೆಸಿದ್ದಾಗ ಅದೊಮ್ಮೆ ತಮ್ಮ ಮನೆಯಲ್ಲಿದ್ದ ಹಳೇ ಕಾಗದ ಮತ್ತು ತಮಿಳು ಪುಸ್ತಕಗಳನ್ನು ರದ್ದಿಯವನಿಗೆ ಕೊಡುತ್ತಿದ್ದರಂತೆ. ಆಗ ಆಕಸ್ಮಿಕವಾಗಿ ತಮಿಳು ಪುಸ್ತಕಗಳ ನಡುವೆ ಕನ್ನಡ ಪುಸ್ತಕವೊಂದು ಅವರ ಕಣ್ಣಿಗೆ ಬಿತ್ತು. ಆ ಪುಸ್ತಕ ದೇವುಡು ಅವರ ಮಯೂರ ಕಾದಂಬರಿಯ ಪುಸ್ತಕವಾಗಿತ್ತು. ಅದನ್ನು ಓದಲು ಕುಳಿತ ಪಾರ್ವತಮ್ಮ ಕಾದಂಬರಿ ಮುಗಿಯುವ ತನಕ ಏಳಲೇ ಇಲ್ಲ.
ಇದೇ ಕಾದಂಬರಿಯನ್ನು ಚಿತ್ರ ಮಾಡಬೇಕೆಂದು ಪಣ ತೊಟ್ಟ ಪಾರ್ವತಮ್ಮ ಡಾ. ರಾಜ್ ಅವರನ್ನು ಒಪ್ಪಿಸಿ ಚಿತ್ರೀಕರಣ ಪ್ರಾರಂಬಿಸಿಯೇ ಬಿಟ್ಟರು. ಆರ್ಥಿಕ ತೊಂದರೆಯ ಕಾರಣ ಚಿತ್ರ ಅರ್ಧಕ್ಕೆ ನಿಂತುಬಿಟ್ಟಿತು. ಹಲವು ದಿನಗಳ ನಂತರ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಮಾಡಲಾಯಿತು.
ಆ ದಿನಗಳಲ್ಲಿ ಮಯೂರ ಭಾರೀ ಹಿಟ್ ಚಿತ್ರವಾದದ್ದು ಇದೀಗ ಇತಿಹಾಸ. ವಿಶೇಷವೆಂದರೆ, ಆ ಚಿತ್ರದ ನಾನಿರುವುದೆ ನಿಮಗಾಗಿ ಎಂಬ ಅಣ್ಣಾವ್ರ ಹಾಡು ಇಗಲೂ ಸಹ ಜನರ ಮನದಲ್ಲಿ ಮರುಕಳಿಸುತ್ತದೆ.