ಡಾ.ವಿಷ್ಣುವರ್ಧನ್ ಅವರ 200ನೇ ಹಾಗೂ ಕಟ್ಟಕಡೆಯ ಚಿತ್ರ ಆಪ್ತರಕ್ಷಕ ಬಿಡುಗಡೆಗೆ ಮುನ್ನವೇ ಹಿರಿಯ ನಟರುಗಳ ಮನಸೂರೆಗೊಂಡಿದ್ದು, ಚಿತ್ರದ ವಿಶೇಷ ಪ್ರದರ್ಶನ ನೋಡಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವಿಷ್ಣು ಅವರ ಸ್ನೇಹಿತ ಹಾಗೂ ಸೂಪರ್ ಸ್ಟಾರ್ ಖ್ಯಾತಿಯ ರಜನೀಕಾಂತ್ ಕುಟುಂಬ ವರ್ಗ ಹಾಗೂ ತಮಿಳು ನಟ, ನಿರ್ಮಾಪಕ ಪ್ರಭು ಹಾಗೂ ತಮಿಳು ನಿರ್ಮಾಪಕ ರಾಮ್ ಕಮಾರ್ ಮತ್ತು ಇತರರಿಗಾಗಿ ಆಪ್ತರಕ್ಷಕ ಚಿತ್ರದ ವಿಶೇಷ ಪ್ರದರ್ಶನವನ್ನು ಚೆನ್ನೈಯಲ್ಲಿ ಆಯೋಜಿಸಲಾಗಿತ್ತು.
ಚಿತ್ರ ನೋಡಿದ ರಜನೀಕಾಂತ್ ಪ್ರತಿಕ್ರಿಯಿಸಿದ್ದು ಹೀಗೆ. ''ಚಿತ್ರ ವೀಕ್ಷಿಸುವಾಗ ನನ್ನ ಭಾವುಕತೆಯನ್ನು ನನಗೇ ಕಂಟ್ರೋಲ್ ಮಾಡಲಾಗಲಿಲ್ಲ. ವಿಷ್ಣು ನಮ್ಮೆಲ್ಲರ ಜೊತೆಗೇ ಮಾತಾಡಿದಂತೆ ಅನಿಸುತ್ತಿತ್ತು. ಚಿತ್ರ ನೋಡುವಾಗ ತುಂಬ ಎಕ್ಸೈಟ್ ಆಗಿಬಿಟ್ಟೆ. ನನ್ನ ಚಿತ್ರ ನೋಡುವಾಗ ಆದಷ್ಟು ಟೆನ್ಶನ್ ನನಗಾಯಿತು'' ಎಂದರು. ಚಿತ್ರದ ಕೊನೆಯ ಭಾಗದಲ್ಲಂತೂ ರಜನೀಕಾಂತ್ ತನ್ನ ಉತ್ಸಾಹ ತಡೆಯಲಾರದೆ, ಕೂತ ಕುರ್ಚಿಯಿಂದ ಹಾಗೇ ನಿಂತುಬಿಟ್ಟರಂತೆ. ''ಕೊನೆಯ ಭಾಗದಲ್ಲಿ ಪ್ರೇಕ್ಷಕರ ಜೊತೆಮಾತನಾಡುವಂತಿರುವ ದೃಶ್ಯದಲ್ಲಂತೂ, ವಿಷ್ಣು ಥೇಟ್ ನನ್ನ ಜೊತೆಗೇ ಬಂದು ಮಾತಾಡಿದಂತೆ ನನಗನಿಸಿತು'' ಎಂದು ರಜನಿ ಭಾವುಕರಾಗಿ ನುಡಿದರು.
WD
ನಿರ್ದೇಶಕ ಪಿ.ವಾಸು ಅವರು ಚಿತ್ರ ಮುಗಿದ ಮೇಲೆ ಹಲವರು ಅಳುತ್ತಾ ತಮ್ಮ ಕಾರು ಹತ್ತುತ್ತಿರುವುದನ್ನು ನೋಡಿದರಂತೆ. ಪಿ.ವಾಸು ಹೇಳುವಂತೆ, ''ಚಿತ್ರ ಮುಗಿದ ಮೇಲೆ ನಿರ್ಮಾಪಕ ರಾಮ್ ಕುಮಾರ್ ಅಳುತ್ತಾ ತಮ್ಮ ಕಾರು ಹತ್ತುವುದನ್ನು ನೋಡಿದೆ. ರಾಮ್ ಕುಮಾರ್ ಹಾಗೂ ಪ್ರಭು ಇಬ್ಬರೂ ವಿಷ್ಣು ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದವರು. ಇವರಿಬ್ಬರೂ ಚಿತ್ರ ನೋಡುವಾಗ ಅತ್ತರು'' ಎಂದು ಅವರು ಹೇಳಿದ್ದಾರೆ.
ಚಿತ್ರದ ಬಗ್ಗೆ ಈಗಾಗಲೇ ನಿರೀಕ್ಷೆಗಳು ಗಗನಕ್ಕೇರಿವೆ. ಈಗಾಗಲೇ ಚಿತ್ರಕ್ಕಾಗಿ ಕಷ್ಟಪಟ್ಟು ದುಡಿದಿದ್ದು, ಚಿತ್ರ ಉತ್ತಮವಾಗಿ ಮೂಡಿಬರಲು ಸಾಕಷ್ಟು ಪ್ರಯತ್ನ ಮಾಡಲಾಗಿದೆ. ವಿಷ್ಣು ಅವರು ಚಿತ್ರವನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದು, ತುಂಬ ಅದ್ಭುತವಾಗಿ ಕಾಣುತ್ತಾರೆ ಕೂಡಾ. ನಮ್ಮ ಪ್ರಯತ್ನ ವೇಸ್ಟ್ ಆಗದಿರಲಿ ಎಂದು ಚಿತ್ರತಂಡ ಪ್ರೇಕ್ಷಕರಲ್ಲಿ ಮನವಿ ಮಾಡಿದೆ.