ಕನ್ನಡದಲ್ಲಿ ಒಂದು ಚಿತ್ರ ಕೊಂಚ ಓಡಿದರೂ ಸಾಕು, ಹೊಸ ನಟನೂ ಕೂಡಾ ತನ್ನ ಕಾಲ್ಶೀಟ್ ದರ ಹೆಚ್ಚಿಸಿಕೊಳ್ಳುತ್ತಾರೆ. ಒಂದೇ ಒಂದು ಚಿತ್ರ ಗೆದ್ದರೆ ಮುಗಿದೇ ಹೋಯಿತು. ಕೈಗೂ ಸಿಗದಷ್ಟು ಎತ್ತರ ಬೆಳೆದು ಬಿಡುತ್ತಾರೆ. ಇದಕ್ಕೆ ಸೂಕ್ತ ಉದಾಹರಣೆ ನಟ ಪ್ರಶಾಂತ್. ಒರಟ ಚಿತ್ರ ಕಷ್ಟಪಟ್ಟು ಐವತ್ತು ದಿವಸ ಪೂರೈಸಿದ್ದೇ ತಡ, ನಾಯಕ ಪ್ರಶಾಂತ್ ಕಾಲ್ಶೀಟ್ ಕೈಗೆಟುಕದ ಮಟ್ಟ ತಲುಪಿತ್ತು.
ವೆಂಕಿ, ಮಂಕಿ, ಅಂಜದಿರು, ಚೆಲ್ಲಿದರು ಸಂಪಿಗೆಯಾ, ಮಹರ್ಷಿ ಹೀಗೆ ಕಮರ್ಷಿಯಲ್ ಮೇಲೆ ಕಮರ್ಷಿಯಲ್ ಚಿತ್ರಗಳನ್ನು ಒಪ್ಪಿಕೊಳ್ಳತೊಡಗಿದ ಅದೇ ಪ್ರಶಾಂತ್, ಈಗ ಏನು ಮಾಡುತ್ತಿದ್ದಾರೆ ಅಂತ ಹುಡುಕಿ ಹೊರಟರೆ, ಇವರು ಕಂಡದ್ದು ಎಂಗೇಜ್ಮೆಂಟ್ನಲ್ಲಿ.
ಪ್ರಶಾಂತ್ಗೆ ಎಂಗೇಜ್ಮೆಂಟಾ ಅಂತ ಹೌಹಾರಬೇಡಿ. ಸದ್ಯಕ್ಕೆ ಇದು ನಕಲಿ ಎಂಗೇಜ್ಮೆಂಟ್ ಅರ್ಥಾತ್ ಸಿನಿಮಾ ಎಂಗೇಜ್ಮೆಂಟ್. ಈ ನಮ್ಮ ಪ್ರಶಾಂತ್ ಈಗ ಸದ್ದಿಲ್ಲದೇ ಎಂಗೇಜ್ಮೆಂಟ್ ಎಂಬ ಚಿತ್ರಕ್ಕೆ ನಾಯಕರಾಗಿದ್ದಾರೆ. ಒಂದು ಹಂತದವರೆಗೆ ತಾನೇ ನಿರ್ದೇಶನ ಮಾಡುತ್ತೇನೆ ಎಂದು ಓಡಾಡಿಕೊಂಡಿದ್ದ ಪ್ರಶಾಂತ್ ಏಕಾಏಕಿ ಎಂಗೇಜ್ಮೆಂಟ್ ಮಾಡಿಕೊಳ್ಳಲು ಮುಂದಾಗಿರುವುದು ಅಚ್ಚರಿ ಮೂಡಿಸಿದೆ.
ಈ ಚಿತ್ರವನ್ನು ಭಾರ್ಗವ, ಎಸ್.ನಾರಾಯಣ್ ಮೊದಲಾದವರ ಬಳಿ ಸಹ ನಿರ್ದೇಶಕರಾಗಿದ್ದ ಎಸ್.ಪಿ. ನಂಜುಂಡಿ ನಿರ್ದೇಶಿಸುತ್ತಿದ್ದಾರೆ. ಆಶಾ ಎಂಬ ಹೊಸ ಪ್ರತಿಭೆ ನಾಯಕಿ. ರಮೇಶ್ ಭಟ್, ರಾಮಕೃಷ್ಣ, ಸತ್ಯಜಿತ್ ಮೊದಲಾದವರು ನಟಿಸಿದ್ದಾರೆ. ಏನೇ ಆಗಲಿ ಪ್ರಶಾಂತ್ ಈ ಚಿತ್ರ ಗೆಲ್ಲಲಿ ಅಂತ ಆಶಿಸೋಣ.