ಕನ್ನಡದಲ್ಲಿ ಇತ್ತೀಚೆಗೆ ಕೆಲ ಚಿತ್ರಗಳು ಗೆಲ್ಲುತ್ತಿವೆ. ಕಳೆದ ಒಂದು ವರ್ಷ ಅವಧಿಯಲ್ಲಿ ವಿಷ್ಣುವರ್ಧನ್ರ ಆಪ್ತರಕ್ಷಕ ಹಾಗೂ ಪುನಿತ್ ರಾಜ್ಕುಮಾರ್ರ ರಾಮ್ ಹೊರತು ಪಡಿಸಿದರೆ ಉಳಿದೆಲ್ಲಾ ಚಿತ್ರಗಳು ಜನರ ಬೆಂಬಲ ಪಡೆಯುವಲ್ಲಿ ವಿಫಲವಾಗಿದ್ದವು.
ಆದರೆ ಇತ್ತೀಚೆಗೆ ಕೆಲ ಹಾಸ್ಯ ಚಿತ್ರಗಳು ಯಶಸ್ಸು ಕಾಣುವ ಮೂಲಕ ನಿರ್ಮಾಪಕ ವರ್ಗ ಕೊಂಚ ಉಸಿರಾಡುವಂತೆ ಮಾಡಿದೆ. ಸಾಲು ಸಾಲು ತೋಪೆದ್ದ ಚಿತ್ರಗಳ ನಡುವೆ ನೊಂದು ಹೋಗಿದ್ದ ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಗೆಲುವಿನ ನಗೆ ಮೂಡುತ್ತಿದೆ. ಅದೂ ಕಳೆದ ನಾಲ್ಕಾರು ವಾರದ ಈಚೆ.
ಹೌದು. ಹೆಂಡ್ತೀರ್ ದರ್ಬಾರ್, ಎರಡನೇ ಮದುವೆ, ಲಿಫ್ಟ್ ಕೊಡ್ಲಾ ಚಿತ್ರಗಳು ಸಾಲು ಸಾಲು ಯಶಸ್ಸು ಕಂಡವು. ಇದಕ್ಕೂ ಮುನ್ನ ನಾನು ನನ್ನ ಕನಸು ಚಿತ್ರ ಕೊಂಚ ಯಶಸ್ಸು ಕಂಡಿತ್ತು. ಈ ರೀತಿ ಕೊನೆಗೂ ಜೂನ್ ತಿಂಗಳಲ್ಲಿ ಸರಿಯಾಗಿ ಮಳೆಗಾಲ ಆರಂಭವಾಗದಿದ್ದರೂ, ಕನ್ನಡ ಚಿತ್ರಗಳು ಚಿಗುರಿದ್ದಂತೂ ಸುಳ್ಳಲ್ಲ. ಪ್ರಕಾಶ್ ರೈ, ರಮೇಶ್, ಅನಂತನಾಗ್, ಜಗ್ಗೇಶ್ ಮತ್ತಿತರ ಹಿರಿಯ ನಟರ ಚಿತ್ರ ಗೆದ್ದಿದ್ದು, ಈ ವಾರ ತೆರೆಕಂಡ ಮೇಷ್ಟ್ರು ಚಿತ್ರ ಸಹ ಕೊಂಚ ಓಡುವ ಸೂಚನೆ ನೀಡುತ್ತಿದೆ.
ಇವೆಲ್ಲವುಗಳ ನಡುವೆ ಅಜಯ್, ರಾಧಿಕಾ ಪಂಡಿತ್ ಅಭಿನಯದ ಕೃಷ್ಣನ್ ಲವ್ ಸ್ಟೋರಿ ಚಿತ್ರ ಕೂಡಾ ಅದ್ಭುತ ಯಶಸ್ಸಿನತ್ತ ಮುನ್ನುಗ್ಗುತ್ತಿದೆ. ಆ ಮೂಲಕ ರಾಧಿಕಾ ಪಂಡಿತ್, ಅಜಯ್ಗೆ ಇನ್ನೂ ಹೆಚ್ಚು ಅವಕಾಶಗಳ ಸುರಿಮಳೆಯಾಗಿದೆ.
ಇಳಿ ವಯಸ್ಸಿನಲ್ಲಿ ಅನಂತ್ ನಟಿಸಿದ ಚಿತ್ರ ಎರಡನೇ ಮದುವೆ ಅತ್ಯಂತ ಯಶಸ್ವಿಯಗುತ್ತಿದ್ದು, ಕಳೆದ ಒಂದು ತಿಂಗಳ ಈಚೆ ಇವರ ಮೂರು ಚಿತ್ರಗಳು ತೆರೆ ಕಂಡಿವೆ. ದೇವರಾಜ್, ರಮೇಶ್, ಜಗ್ಗೇಶ್ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ಎಷ್ಟೇ ಹೊಸ ನೀರು ಬಂದರೂ, ಹಳೆ ನೀರು ಕೊಚ್ಚಿ ಹೋಗುವುದಿಲ್ಲ ಅಂತ ಸಾಬೀತಾಗಿದೆ.