ಮೂರು ವರ್ಷ ಹಿಂದೆ ನೀವೆಲ್ಲಾ ದುನಿಯಾ ಚಿತ್ರ ನೋಡಿ ಮೆಚ್ಚಿಕೊಂಡಿದ್ದೀರಿ. ಈ ಯಶಸ್ವಿ ಚಿತ್ರದ ನಿರ್ಮಾಪಕ ಸಿದ್ದರಾಜು ಇದೀಗ ಮತ್ತೊಮ್ಮೆ ಅದೇ ಹುಮ್ಮಸ್ಸಿನಲ್ಲಿ ಯಕ್ಷ ಚಿತ್ರದ ಮೂಲಕ ಸುದ್ದಿ ಮಾಡುತ್ತಿದ್ದಾರೆ.
ಚಿತ್ರವನ್ನು ಅತ್ಯಂತ ಮುತುವರ್ಜಿಯಿಂದ ನಿರ್ಮಿಸಿದ್ದು, ಇದು ಇನ್ನೊಂದು ದುನಿಯಾ ಮಾದರಿಯ ಯಶಸ್ಸು ಕಾಣಲಿದೆ ಎನ್ನುವುದು ಅವರ ಅಭಿಪ್ರಾಯ. ಸಿನಿಮಾ ಚೆನ್ನಾಗಿಲ್ಲ ಅಂದರೆ ನೇರವಾಗಿ ಮಾಧ್ಯಮಗಳ ಮುಂದೆ ಹೇಳಿ. ಬೇರೆ ಸಿನಿಮಾ ಮಾಡಿ ಮೆಚ್ಚಿಸುವ ಯತ್ನ ಮಾಡುತ್ತೇವೆ. ಚಿತ್ರ ನೋಡಿಕೊಂಡು ಮನಸ್ಸಿನಲ್ಲಿಯೇ ಬೇಸರ ಇಟ್ಟುಕೊಂಡು ಹೋಗಬೇಡಿ. ನಮ್ಮಲ್ಲಿರುವ ನ್ಯೂನತೆ ಹೇಳಿದರೆ ಸರಿಪಡಿಸಿಕೊಳ್ಳಲು ಅನುಕೂಲ ಆಗುತ್ತದೆ. ಆದರೆ ಹೆಚ್ಚಿನ ಪ್ರೇಕ್ಷಕರು ಏನನ್ನೂ ಹೇಳದೇ ಹೊರಟು ಹೋಗ್ತಾರೆ ಮತ್ತೆಂದೂ ಚಿತ್ರಮಂದಿರದತ್ತ ಬರುವುದಿಲ್ಲ. ಹತ್ತಾರು ಜನ ನೋಡಿ ಚೆನ್ನಾಗಿದೆ ಅಂತ ಹೇಳಿದರೆ ಮಾತ್ರ ಚಿತ್ರ ಮಂದಿರಕ್ಕೆ ಬರುತ್ತಾರೆ. ಇದರಿಂದ ಇಂದು ಚಿತ್ರಮಂದಿರಕ್ಕೆ ಬರುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಇದನ್ನು ತಪ್ಪಿಸಲು ಸಲಹೆ ನೀಡಿ ಎನ್ನುತ್ತಾರೆ ಸಿದ್ಧರಾಜು.
ಲೂಸ್ ಮಾದ ಯೋಗೀಶ್ ಅಪ್ಪನ ಬ್ಯಾನರ್ ಮೂಲಕ ಈ ಚಿತ್ರದಲ್ಲಿ ಮತ್ತೊಮ್ಮೆ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಮಚ್ಚು, ಲಾಂಗ್ ಎಲ್ಲಾ ಈ ಚಿತ್ರದಲ್ಲಿದೆ. ಆದರೆ ಇದನ್ನು ಹಿಡಿಯುವ ಪಾತ್ರವನ್ನೂ ವಿಭಿನ್ನವಾಗಿ ತೋರಿಸಲಾಗಿದೆ. ಅದರಲ್ಲಿ ನಿರ್ದೇಶಕ ರಮೇಶ್ ಆರ್. ಭಾಗ್ವತ್ ಪಾತ್ರ ಪ್ರಮುಖವಾದುದು ಎನ್ನುತ್ತಾರೆ ಲೂಸ್.
ಚಿತ್ರದಲ್ಲಿ ನಾನಾ ಪಾಟೇಕರ್ ಹಾಗೂ ಅತುಲ್ ಕುಲಕರ್ಣಿಯನ್ನು ಕರೆಸಿ ಅಭಿನಯಿಸಿದ್ದು ಈ ಚಿತ್ರದ ಇನ್ನೊಂದು ವಿಶೇಷ. ನಾನಾ ಪಾಟೇಕರ್ ಪೊಲೀಸ್ ಪಾತ್ರ ವಹಿಸಿದ್ದು, ಇವರದ್ದೇ ತಮ್ಮ ಪಾತ್ರಕ್ಕೆ ಕನ್ನಡದಲ್ಲೇ ಡಬ್ಬಿಂಗ್ ಮಾಡಿರುವುದು ಮತ್ತೊಂದು ವಿಶೇಷ. ಚಿತ್ರದಲ್ಲಿ ಐದು ಹಾಡುಗಳಿವೆ. ಹಾಂಕಾಂಗ್, ಬ್ಯಾಂಕಾಕ್ಗಳಲ್ಲಿ ಹಾಡಿನ ಚಿತ್ರೀಕರಣ ಆಗಿದೆ. ಚಿತ್ರ ಬಿಡುಗಡೆಯಾದ ಮೇಲಷ್ಟೇ ಈ ಪ್ರಯತ್ನಕ್ಕೆ ಫಲ ದೊರೆಯುತ್ತಾ ಅಂತ ಹೇಳಬಹುದು.