ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗಣೇಶ್ 'ಕೂಲ್'ನಿಂದ ನಿರ್ದೇಶಕ ಔಟ್, ಈಗ ಗಣೇಶ್ ನಿರ್ದೇಶಕ! (Golden Star Ganesh | Kool | Mussanje Mahesh | Shilpa Ganesh | Sana Khan)
ಗಣೇಶ್ 'ಕೂಲ್'ನಿಂದ ನಿರ್ದೇಶಕ ಔಟ್, ಈಗ ಗಣೇಶ್ ನಿರ್ದೇಶಕ!
PR
ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಕೂಲ್- ಸಕತ್ ಹಾಟ್ ಮಗಾ' ಚಿತ್ರದ ಆರಂಭದ ಗಳಿಗೆಯೇ ಚೆನ್ನಾಗಿಲ್ಲವೋ ಗೊತ್ತಿಲ್ಲ. ಒಟ್ಟಾರೆ, ಆರಂಭದಲ್ಲೇ ವಿಘ್ನಗಳ ಮೇಲೆ ವಿಘ್ನಗಳು ವಕ್ಕರಿಸಿಕೊಳ್ಳುತ್ತಿವೆ. ಮೊದಲು ನಾಯಕಿ ನಟಿ ಆಮ್ನಾ ಶರೀಫ್ ಜಾಗಕ್ಕೆ ದಿಢೀರ್ ಸಾನಾ ಖಾನ್ ತಂದಿದ್ದಾಯಿತು. ಇದೀಗ ಶೂಟಿಂಗ್ ಆರಂಭವಾದ ಎರಡೇ ದಿನಗಳಲ್ಲಿ ನಿರ್ದೇಶಕ ಮುಸ್ಸಂಜೆ ಮಹೇಶ್ ಚಿತ್ರದಿಂದ ಹೊರಬಿದ್ದಿದ್ದಾರೆ. ಗಣೇಶ್ ಪತ್ನಿ ಶಿಲ್ಪಾರೇ ಸ್ವತಃ ನಿರ್ದೇಶಕರಿಗೆ ಗೆಟ್ ಔಟ್ ಎಂದು ಹೇಳಿದ್ದಾರೆಂಬ ಸುದ್ದಿಯೀಗ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿದೆ.
ದಿಢೀರ್ ಆಗಿ ನಿರ್ದೇಶಕ ಹೊರನಡೆದ ಫಲವಾಗಿ ಇದೀಗ ಗಣೇಶ್ ತಾವೇ ನಿರ್ದೇಶಕನ ಕುರ್ಚಿಯಲ್ಲಿ ಕುಳಿತು ಆಕ್ಷನ್, ಕಟ್ ಹೇಳುತ್ತಿದ್ದಾರೆ!
ಶಿಲ್ಪಾ ಗಣೇಶ್ ನಿರ್ಮಾಣದ ಕೂಲ್ ಚಿತ್ರದ ಶೂಟಿಂಗ್ಗಾಗಿ ನಿರ್ದೇಶಕ ಮುಸ್ಸಂಜೆ ಮಹೇಶ್ ಅವರು ಚಿತ್ರತಂಡದ ಜೊತೆಗೆ ಊಟಿಗೆ ಹೋಗಿದ್ದರು. ಖ್ಯಾತ ಛಾಯಾಗ್ರಾಹಕ ರತ್ನವೇಲು ಅವರು ಚಿತ್ರಕ್ಕೆ ಕ್ಯಾಮರಾ ಹಿಡಿಯುತ್ತಿದ್ದರು. ರತ್ನವೇಲು ಹಾಗೂ ನಿರ್ದೇಶಕರ ನಡುವಿನ ಹೊಂದಾಣಿಕೆಯ ಕೊರತೆಯೇ ಈ ಘಟನೆಗೆ ಕಾರಣ ಎನ್ನಲಾಗಿದೆ.
MOKSHA
ಮುಸ್ಸಂಜೆ ಮಹೇಶ್ ಹೇಳುವ ಪ್ರಕಾರ, ನಾನು ಹೇಳಿದಂತೆ ರತ್ನವೇಲು ಅವರು ಕ್ಯಾಮರಾ ಹಿಡಿಯುತ್ತಿರಲಿಲ್ಲ. ಚಿತ್ರಕ್ಕೆ ಅಗತ್ಯವಾದ ರೀತಿಯಲ್ಲಿ ನಾನು ಹೇಳಿದರೆ ಅವರು ಅವರಿಗನಿಸಿದ್ದನ್ನೇ ಮಾಡುತ್ತಿದ್ದರು. ನಾನು ಹೇಳಿದ ಒಂದೇ ಒಂದು ಸಲಹೆಯನ್ನೂ ಅವರು ಸ್ವೀಕರಿಸಲಿಲ್ಲ. ನಿರ್ದೇಶಕನಿಗೆ ಅತೀ ಅಗತ್ಯವಾದ ಛಾಯಾಗ್ರಾಹಕನೇ ಹೀಗೆ ಮಾಡಿದರೆ ಅಲ್ಲಿ ನಿರ್ದೇಶಕನಿಗೇನು ಕೆಲಸವಿದೆ ಹೇಳಿ? ಅದಕ್ಕಾಗಿ ಎರಡು ಮೂರು ಬಾರಿ ಶಿಲ್ಪಾ ಗಣೇಶ್ ಅವರ ಗಮನಕ್ಕೆ ತಂದೆ. ಆದರೆ ಶಿಲ್ಪಾ, ರತ್ನವೇಲು ಅವರ ಪರವಾಗಿಯೇ ಮಾತನಾಡಿದರು. ಗೆಟ್ ಔಟ್ ಅಂದರು. ಸರಿ ಎಂದು ಹಿಂತಿರುಗಿ ಬಂದೆ ಎಂದು ಘಟನೆಯನ್ನು ವಿವರಿಸುತ್ತಾರೆ.
ಗಣೇಶ್ ತಮ್ಮ ನಿರ್ಮಾಣದ ಈ ಕೂಲ್ ಚಿತ್ರಕ್ಕೆ ಈಗಾಗಲೇ ತನ್ನ ಅಭಿನಯದ 'ಏನೋ ಒಂಥರಾ' ಚಿತ್ರಕ್ಕೆ ಆಕ್ಷನ್, ಕಟ್ ಹೇಳಿದ ಮುಸ್ಸಂಜೆ ಮಹೇಶ್ ಅವರನ್ನು ಮೆಚ್ಚಿ ಆಯ್ಕೆ ಮಾಡಿದ್ದರು. ಈಗ್ಗೆ ಎರಡೇ ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟಿ ಆಮ್ನಾ ಶರೀಫ್ ಅವರ ಬದಲಾಗಿ ದಿಢೀರ್ ಊಟಿಗೇ ಕರೆತಂದ ತಮಿಳಿನ ಸಿಲಂಬಾಟ್ಟಂ ಚಿತ್ರದ ಖ್ಯಾತಿಯ ನಾಯಕಿ ಸಾನಾ ಖಾನ್ ಅವರನ್ನು ಆಯ್ಕೆ ಮಾಡಿ ಕೂಲ್ ಚಿತ್ರ ಸುದ್ದಿಯಾಗಿತ್ತು. ಆ ಸುದ್ದಿ ಮರೆಯುವ ಮುನ್ನವೇ ಮತ್ತೊಂದು ಸುದ್ದಿ ಬಂದೆರಗಿದೆ. ಇದೀಗ ಅನಿವಾರ್ಯವಾಗಿ ವಿಧಿಯಿಲ್ಲದೆ ನಿರ್ದೇಶಕನ ಕುರ್ಚಿಯಲ್ಲಿ ಕುಳಿತ ಗೋಲ್ಡನ್ ಸ್ಟಾರ್ ಗಣೇಶ್ ರತ್ನವೇಲು ಅವರ ಮಾರ್ಗದರ್ಶನದಲ್ಲಿ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ!!!