ಕೃಷ್ಣನ್ ಲವ್ ಸ್ಟೋರಿ ವಾರದ ಹಿಂದೆ ಗೆದ್ದಿದೆ ಎಂಬ ಘೋಷಣೆ ಆದ ಬೆನ್ನಲ್ಲೇ ಅನಂತನಾಗ್, ಸುಹಾಸಿನಿ ಮುಖ್ಯ ಪಾತ್ರದಲ್ಲಿರುವ ದಿನೇಶ್ ಬಾಬು ನಿರ್ದೇಶನದ ಎರಡನೇ ಮದುವೆ ಸಹ ಗೆದ್ದಿದೆ ಎಂಬ ಸುದ್ದಿ ಕೇಳಿ ಬಂದಿದೆ.
ಹೌದು. ಕಳೆದ ವಾರ 25 ದಿನ ಪೂರೈಸುವ ಜತೆಗೆ, ರಾಜ್ಯಾದ್ಯಂತ ಸಾಕಷ್ಟು ಕೇಂದ್ರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡು ಚಿತ್ರ ಗೆಲುವಿನ ನಗೆ ಬೀರಿದೆ. ಚಿತ್ರದಲ್ಲಿ ಅನಂತ್, ಸುಹಾಸಿನಿ ಜತೆ ಪ್ರೇಮ್, ಜೆನ್ನಿಫರ್, ಶರಣ್, ತಾರಾ, ರಂಗಾಯಣ ರಘು ಎಲ್ಲರೂ ಅತ್ಯುತ್ತಮ ಅಭಿನಯದ ಮೂಲಕ ಜನರಲ್ಲಿ ನಗೆಯ ಹೊಳೆ ಹರಿಸಿರುವುದೇ ಚಿತ್ರದ ಗೆಲುವಿಗೆ ಕಾರಣ ಎನ್ನಲಾಗುತ್ತಿದೆ. ಬೆಂಗಳೂರು, ಮೈಸೂರು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರಕ್ಕೆ ಪ್ರೇಕ್ಷಕ ಗೆಲುವಿನ ಮುದ್ರೆ ಒತ್ತಿದ್ದಾನೆ.
ಚಿತ್ರದ ಯಶಸ್ಸಿನಲ್ಲಿ ಸಂಭಾಷಣೆ ಬರೆದಿರುವ ರಾಜೇಂದ್ರ ಕಾರಂತ್ ಪಾತ್ರವೂ ಅತ್ಯಂತ ಪ್ರಮುಖ. ಆದರೆ ಇವರು ಚಿತ್ರದ ಬಿಡುಗಡೆ ನಂತರ ಕೊಂಚ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಅದೇನೆಂದರೆ ಚಿತ್ರದಲ್ಲಿ ಕೆಲ ಡೈಲಾಗ್ಗಳಲ್ಲಿ ಡಬ್ಬಲ್ ಮೀನಿಂಗ್ ಸಂಭಾಷಣೆಯೂ ಇದೆ. ತಾವು ತಮ್ಮ ಪೆನ್ನಿಂದ ಇಂತ ಸಂಭಾಷಣೆ ಬರೆದಿಲ್ಲ. ತಮಗೆ ಅರಿವಾಗದಂತೆ ಚಿತ್ರದಲ್ಲಿ ಇವನ್ನು ಸೇರಿಸಲಾಗಿದೆ ಎಂದು ದೂರಿದ್ದಾರೆ.
ಏನೇ ಇರಲಿ ಜನ ಇದನ್ನೂ ಸೇರಿಸಿಕೊಂಡು ಇಡೀ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇನ್ನೊಂದು ವಿಶೇಷ ಅಂದರೆ ಮುಖ್ಯಮಂತ್ರಿ ಯಡಿಯೂರಪ್ಪನವರೇ ಈ ಚಿತ್ರ ವೀಕ್ಷಿಸಿ ಭೇಷ್ ಅಂದಿದ್ದಾರೆ. ವಿಶೇಷ ಅಂದರೆ ಈ ಚಿತ್ರ ಶೀಘ್ರವೇ ಹಿಂದಿಗೂ ರಿಮೇಕ್ ಆಗುತ್ತಿದೆ. ಹೇಗಿದೆ ನೋಡಿ ಕನ್ನಡದ ಮಹಿಮೆ!