ದುನಿಯಾ ವಿಜಯ್ ಬಳ್ಳಾರಿ ಜೈಲಿನಲ್ಲಿ ಇದ್ದಾರಂತೆ. ಅಯ್ಯೋ ಅವರೇನು ಎಡವಟ್ಟು ಮಾಡಿಕೊಂಡರು ಅಂತ ಅಭಿಮಾನಿಗಳು ಗಾಬರಿ ಪಡಬೇಕಿಲ್ಲ. ಇವರು ತಮ್ಮ ವೀರಬಾಹು ಚಿತ್ರದ ಚಿತ್ರೀಕರಣಕ್ಕಾಗಿ ಅಲ್ಲಿ ತೆರಳಿದ್ದಾರೆ. ಮೊನ್ನೆ ಮೊನ್ನೆ ಸ್ಮಶಾನದಲ್ಲಿ ನಾಲ್ಕು ದಿನ ಕಳೆದು ಸುದ್ದಿಯಾಗಿದ್ದ ಇವರು ಇದೀಗ ಜೈಲಲ್ಲಿ ಹೋಗಿ ಇಣುಕಿದ್ದಾರೆ.
ಚಿತ್ರದಲ್ಲಿ ಇವರ ಪಾತ್ರ ಶಾಂತ ಸ್ವಭಾವದ್ದಂತೆ. ಆದರೆ ತುಂಬಾ ಒರಟು ಗುಣದವಿರುವಾತ. ಈ ಮಾದರಿಯ ವ್ಯಕ್ತಿಯ ಮೇಲೆ ಪೊಲೀಸರು ಸುಳ್ಳು ಆರೋಪ ಹೊರಿಸಿ ಜೈಲಿಗೆ ತಳ್ಳುತ್ತಾರೆ. ಯಾರೋ ಮಾಡಿದ ಅಪರಾಧಕ್ಕೆ ನಾಯಕ ತಲೆ ಕೊಡಬೇಕಾಗಿ ಬರುತ್ತದೆ. ಠಾಣೆಯಲ್ಲಿ ಬೆತ್ತದೇಟು ತಿಂದ ನಂತರ ಬಳ್ಳಾರಿ ಜೈಲಿಗೆ ರವಾನೆ ಆಗುತ್ತಾನೆ. ಈ ಎಲ್ಲಾ ದೃಶ್ಯದ ಚಿತ್ರೀಕರಣ ಜೈಲು ಹಾಗೂ ಠಾಣೆಯಲ್ಲಿ ಚಿತ್ರೀಕರಿಸುವ ಕಾರ್ಯ ಭರದಿಂದ ಸಾಗಿದೆ.
ಇನ್ನೊಂದು ವಿಶೇಷ ಅಂದರೆ ಇದೆಲ್ಲಾ ಅಸಲಿ ಬಳ್ಳಾರಿ ಜೈಲಿನಲ್ಲಿ ತೆಗೆದದ್ದಲ್ಲ. ಮೈಸೂರಿನ ಸಮ್ಮರ್ ಪ್ಯಾಲೇಸ್ ಆವರಣದಲ್ಲಿ ಕಲಾ ನಿರ್ದೇಶಕ ರೇವಣ್ಣ ಮಳವಳ್ಳಿ ಹಾಕಿದ ಸೆಟ್ನಲ್ಲಿ. ಅಸಲಿ ಬಳ್ಳಾರಿ ಜೈಲನ್ನೇ ಹೋಲುವ ರೀತಿ ಸೆಟ್ ಹಾಕಿ ಗೆದ್ದಿದ್ದಾರೆ ರೇವಣ್ಣ.
ಸಹ ಕಲಾವಿದರೊಂದಿಗೆ ನಾನಾ ದೃಶ್ಯದಲ್ಲಿ ವಿಜಿ ಪಾಲ್ಗೊಂಡು ಚಿತ್ರದ ಚಿತ್ರೀಕರಣಕ್ಕೆ ಸಹಕರಿಸಿದರು. ಇದನ್ನು ಮುಗಿಸಿಕೊಂಡ ಚಿತ್ರತಂಡ ಮೇಲುಕೋಟೆಯತ್ತ ಪ್ರಯಾಣ ಬೆಳೆಸಿದೆ. ಇಲ್ಲಿ ಕೆಲದಿನ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಎಸ್.ಮಹೇಂದರ್ ತಿಳಿಸಿದ್ದಾರೆ.