ವಾಣಿಜ್ಯ ಮಂಡಳಿ ಮೆಟ್ಟಿಲೇರಿದ ಗಣೇಶ್ ಶಿಲ್ಪಾ 'ಕೂಲ್' ವಿವಾದ
MOKSHA
ಗಣೇಶ್ಗ್ಯಾಕೋ ಟೈಮೇ ಸರಿಯಾಗಿಲ್ಲ. ಕೂಲ್ ಚಿತ್ರ ಆರಂಭದಲ್ಲೇ ವಿಘ್ನ ಎದುರಿಸುತ್ತಿದೆ. ಗೋಲ್ಡನ್ ಸ್ಟಾರ್ ಸ್ವಂತ ಬ್ಯಾನರಿನ ಕೂಲ್ ಚಿತ್ರದ ನಿರ್ದೇಶಕ ಮುಸ್ಸಂಜೆ ಮಹೇಶ್ ಅವರಿಗೆ ಶಿಲ್ಪಾ ಗೆಟ್ ಔಟ್ ಅಂದ ಮೇಲೆ ಅನಿವಾರ್ಯವಾಗಿ ನಿರ್ದೇಶನ ಮಾಡಲು ಹೊರಟಿರುವ ಗಣೇಶ್ ಒಂದೆಡೆ ನಿರ್ದೇಶನದ ಅ, ಆ, ಇ, ಈ ಕಲಿಯಲು ಶ್ರಮ ಪಡುತ್ತಿದ್ದರೆ ಇನ್ನೊಂದೆಡೆ, ಈ ವಿವಾದವೀಗ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲು ಹತ್ತಿದೆ. ಸಮಸ್ಯೆಯ ಪರಿಹಾರಕ್ಕಾಗಿ ಇದೀಗ ಗಣೇಶ್ ಶೂಟಿಂಗ್ ಮಧ್ಯೆ ಬಿಡುವು ಮಾಡಿಕೊಂಡು ಬೆಂಗಳೂರಿಗೆ ಬರಬೇಕಾಗಿದೆ.
ನಿರ್ದೇಶಕರ ಸಂಘ ಮುಸ್ಸಂಜೆ ಮಹೇಶ್ ಪರವಾಗಿ ನಿಂತಿದ್ದರೆ, ಅತ್ತ ನಿರ್ಮಾಪಕ ಸಂಘ ಗಣೇಶ್ ಶಿಲ್ಪಾ ದಂಪತಿ ಪರವಾಗಿ ನಿಂತಿದೆ. ಶಿಲ್ಪಾ ಗೆಟ್ ಔಟ್ ಎಂದಿದ್ದು ಹೌದೇ ಆದಲ್ಲಿ ಎಲ್ಲರ ಮುಂದೆ ಶಿಲ್ಪಾ ಕ್ಷಮೆ ಕೋರಬೇಕು ಎಂದು ನಿರ್ದೇಶಕ ಸಂಘ ವಾದಿಸಿದೆ. ಅಷ್ಟೇ ಅಲ್ಲದೆ, ಗಣೇಶ್ ನಿರ್ದೇಶಕರ ಸಂಘದ ಸದಸ್ಯರಾಗದಿದ್ದರೆ, ಅವರ ಕೂಲ್ ಚಿತ್ರದ ಶೂಟಿಂಗ್ಗೆ ಯಾವುದೇ ಸಹಾಯಕ ನಿರ್ದೇಶಕರನ್ನೂ ಕಳುಹಿಸದಿರಲು ತೀರ್ಮಾನಿಸಿದೆ.
ಅತ್ತ ನಿರ್ಮಾಪಕರ ಸಂಘ ಗಣೇಶ್ ಅವರು ಸಂಕಷ್ಟದಲ್ಲಿರುವುದರಿಂದ ಅವರಿಗೆ ಸಹಾಯ ಮಾಡಿ, ಸಹಾಯಕರನ್ನು ಕಳುಹಿಸಿ ಎಂದು ನಿರ್ದೇಶಕರಲ್ಲಿ ವಿನಂತಿಸಿದೆ. ಹೀಗಾಗಿ ಇದು ಅಂತಿಮವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲು ಹತ್ತಿದೆ.
ಇದೇ ವೇಳೆ ಕೂಲ್ನಿಂದ ಹೊರಬಂದ ನಿರ್ದೇಶಕ ಮುಸ್ಸಂಜೆ ಮಹೇಶ್ ಅವರು ಕೂಲ್ ಚಿತ್ರಕ್ಕಾಗಿ ಸಂಭಾಷಣೆ, ಚಿತ್ರಕಥೆ ಬರೆದಿದ್ದು ಇದಕ್ಕಾಗಿ ಎರಡು ತಿಂಗಳ ಕಾಲ ತೆಗೆದುಕೊಂಡಿದ್ದಾರೆ. ಹೀಗಾಗಿ ಅವರಿಗೆ ಈ ಸಂಬಂಧ ಚಿತ್ರದಲ್ಲಿ ಸೂಕ್ತ ಕ್ರೆಡಿಟ್ ಹಾಗೂ ಸಂಭಾವನೆ ನೀಡಬೇಕು ಎಂದು ನಿರ್ದೇಶಕರ ತಂಡ ವಾದಿಸಿದೆ.
ಇನ್ನೊಂದೆಡೆ ನಿರ್ದೇಶಕರೇ ಇಲ್ಲದೆ ಕೂಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ನಿಂತ ನಟ ಗೋಲ್ಡನ್ ಸ್ಟಾರ್ ಕಳೆದೆರಡು ದಿನಗಳಿಂದ ಯಾವುದೇ ಕಷ್ಟವಿಲ್ಲದೆ ಉತ್ತಮವಾಗಿಯೇ ಕೆಲಸ ನಿಭಾಯಿಸುತ್ತಿದ್ದಾರೆ ಎನ್ನಲಾಗಿದೆ. ಗಣೇಶ್ ತಮ್ಮ ಮೇಲೆ ಬಿದ್ದಿರುವ ಜವಾಬ್ದಾರಿಯನ್ನು ತುಂಬ ಗಂಭೀರವಾಗಿಯೇ ತೆಗೆದುಕೊಂಡು ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಸಮಸ್ಯೆ ಪರಿಹರಿಸಿಕೊಳ್ಳಲು ಗಣೇಶ್ ಶೀಘ್ರವೇ ಶೂಟಿಂಗ್ನ ಮಧ್ಯೆ ಬಿಡುವು ಮಾಡಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹಾಜರಾಗಲಿದ್ದಾರೆ.