ಸಾಲು ಸಾಲು ಸೋಲುವ ಚಿತ್ರವನ್ನೇ ನಿರ್ಮಿಸಿದ ಥ್ರಿಲ್ಲರ್ ಮಂಜು ಇನ್ನೊಂದು ಚಿತ್ರ ಸಿದ್ಧತೆ ನಡೆಸಿದ್ದಾರೆ. ನಾಲ್ಕು ವಾರ ಹಿಂದೆ ತೆರೆಕಂಡ ಇವರ ಜಯಹೇ ಚಿತ್ರ ಸಂಪೂರ್ಣ ಸೋತಿಲ್ಲ. ಪ್ರತಿಷ್ಠಿತ ಕಪಾಲಿ ಚಿತ್ರಮಂದಿರದಲ್ಲಿ 25 ದಿನ ಓಡಿದೆ. ಅದೇ ಉತ್ಸಾಹದಲ್ಲಿ ತಾನು ಗೆದ್ದೆ ಎಂದುಕೊಂಡಿರುವ ಥ್ರಿಲ್ಲರ್ ನಿರ್ಮಾಪಕರನ್ನು ಹೊರತುಪಡಿಸಿ ಉಳಿದೆಲ್ಲಾ ಜಯಹೇ ತಂಡದ ಸದಸ್ಯರನ್ನೇ ಒಳಗೊಂಡು ಹೊಸ ಚಿತ್ರ ಮಾಡಲು ಹೊರಟಿದ್ದಾರೆ.
ಹೌದು. ಜಯಹೇ ಚಿತ್ರದ ಹೊಡೆತದಿಂದಲೇ ಆಚೆ ಬರಲಾಗದೇ ನರಳುತ್ತಿರುವ ನಿರ್ಮಾಪಕರನ್ನು ಕೈ ಬಿಟ್ಟು ಥ್ರಿಲ್ಲರ್ ಇದೀಗ ಗುರುಮೂರ್ತಿ ಅವರ ಕೈ ಹಿಡಿದಿದ್ದಾರೆ. ಇದೇ ಗುರುಮೂರ್ತಿ ಈ ಹಿಂದೆ ಥ್ರಿಲ್ಲರ್ ಅಭಿನಯದ ಪೊಲೀಸ್ ಸ್ಟೋರಿ, ಪೊಲೀಸ್ ಸ್ಟೋರಿ 2, ಥ್ರಿಲ್ಲರ್ ಕಿಲ್ಲರ್ ಚಿತ್ರಗಳನ್ನು ನಿರ್ಮಿಸಿದ್ದರು. ಹೊಸ ಚಿತ್ರದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆ ಥ್ರಿಲ್ಲರ್ ಅವರೇ ಹೊತ್ತಿದ್ದಾರೆ. ನಾಯಕರೂ ಅವರೇ ಆಗುವ ಸಾಧ್ಯತೆ ದಟ್ಟವಾಗಿದೆ.
ಇದೊಂದು ಆಕ್ಷನ್ ಚಿತ್ರ ಅನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯ ಇಲ್ಲ. ಜಯಹೇ ಚಿತ್ರದಲ್ಲಿ ಕಸರತ್ತಿನ ಜತೆ ದೈಹಿಕ ಸೌಂದರ್ಯವನ್ನೂ ಧಾರಾಳವಾಗಿ ಪ್ರದರ್ಶಿಸಿದ್ದ ಆಯೇಷಾ ಈ ಚಿತ್ರದಲ್ಲೂ ನಾಯಕಿ. ಆದರೆ ಇಷ್ಟು ಸಾಲದು ಎನ್ನುವಂತೆ ಇನ್ನೊಬ್ಬ ನಾಯಕಿಯನ್ನೂ ಬಳಸಲು ಥ್ರಿಲ್ಲರ್ ನಿರ್ಧರಿಸಿದ್ದಾರಂತೆ. ಅವರ ಹೆಸರನ್ನು ಇನ್ನೂ ಸಸ್ಪೆನ್ಸ್ ಆಗಿ ಇರಿಸಲಾಗಿದೆ. ಚಿತ್ರಕ್ಕೆ ಕೃಪಾಕರ್ ಸಂಗೀತ ಇರಲಿದೆ. ಜನಾರ್ದನ್ ಬಾಬು ಛಾಯಾಗ್ರಾಹಕರು. ಚಿತ್ರಕ್ಕೆ ಇನ್ನೂ ಹೆಸರಿಡುವ ಕಾರ್ಯ ಆಗಿಲ್ಲ.