ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಯಾರೂ ಮಾಡಿರದ ಅತಿ ದೊಡ್ಡ ಬಜೆಟ್ನ ಪೌರಾಣಿಕ ಚಿತ್ರ ಮಾಡಲು ಬಹುವರ್ಷದಿಂದ ಯೋಜನೆ ರೂಪಿಸುತ್ತಿರುವ ಮಾಜಿ ಶಾಸಕ ಹಾಗೂ ನಟ ಕುಮಾರ್ ಬಂಗಾರಪ್ಪ ಅವರಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.
ಪ್ರತಿಯೊಬ್ಬರೂ ಲಾಭದ ಬಗ್ಗೆಯೇ ಯೋಚಿಸುತ್ತಿರುವ ಈ ದಿನದಲ್ಲಿ ಅಪಾರ ವೆಚ್ಚದಲ್ಲಿ ಕನ್ನಡ ಚಿತ್ರವೊಂದನ್ನು ನಿರ್ಮಿಸಿ ನಟಿಸಲು ಮುಂದಾಗಿದ್ದ ಕುಮಾರ್ ಬಂಗಾರಪ್ಪಗೆ ಮತ್ತೊಂದು ಆಘಾತ ಕಾಡಿದೆ. ಇವರ ಚಿತ್ರ ನಿರ್ಮಿಸುವುದಾಗಿ ಒಪ್ಪಿಕೊಂಡಿದ್ದ ನಿರ್ದೇಶಕ ಟಿ.ಎಸ್. ನಾಗಾಭರಣ ಈಗ ಭಾರೀ ಮೊತ್ತದ ಸಂಭಾವನೆಯ ಬೇಡಿಕೆ ಮುಂದಿಟ್ಟಿದ್ದಾರಂತೆ. ಕೋಟಿಗಳನ್ನು ದಾಟುತ್ತಿದ್ದ ಈ ಚಿತ್ರದ ವೆಚ್ಚದ ಬಗ್ಗೆ ತಿಳಿದ ನಾಗಾಭರಣ ಚಿತ್ರವನ್ನು ಹೇಗೂ ತೆಗೆಯುತ್ತಿದ್ದೀರಿ ನನಗೂ ಒಂದಿಷ್ಟು ಕೋಟಿ ಲೆಕ್ಕದಲ್ಲಿ ಸಂಭಾವನೆ ಕೊಡಿ ಎಂದಿದ್ದಾರಂತೆ ಎಂಬ ಸುದ್ದಿಯೀಗ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.
ಚಿತ್ರಕ್ಕಾಗಿ ತಮ್ಮ ಶ್ರಮ ಎಷ್ಟು ಎನ್ನುವುದು ಏಕೆ ನಿರ್ದೇಶಕರಿಗೆ ಅರ್ಥವಾಗುತ್ತಿಲ್ಲ. ಇಷ್ಟೊಂದು ಹಾಕಿ ಸಿನಿಮಾ ಮಾಡಲು ಮುಂದಾಗಿರುವ ತಮಗೆ ಸಹಾಯ ಮಾಡಲು ಯಾರೂ ಬರುತ್ತಿಲ್ಲ. ಇದ್ದುದರಲ್ಲೇ ತಿಂದು ಹೋಗಲು ಹೆಚ್ಚಿನವರು ಹವಣಿಸುತ್ತಿದ್ದಾರಲ್ಲ ಅಂತ ಎಲ್ಲೋ ಅಲವತ್ತುಕೊಂಡಿದ್ದಾರಂತೆ ಕುಮಾರ್.
ಚಿತ್ರಕ್ಕಾಗಿ ಉದ್ದ ಕೂದಲು ಬಿಟ್ಟದ್ದೇ ಬಂತು. ಆದರೆ ಯಾವ ಪ್ರಯೋಜನವೂ ಆಗಿಲ್ಲ. ರೇಣುಕಾಂಬ ಲಾಂಛನದಲ್ಲಿ ನಿರ್ಮಾಣಗೊಳಿಸಲು ಉದ್ದೇಶಿಸಿದ್ದ 'ಕೆಳದಿ ಶಿವಪ್ಪ ನಾಯಕ' ಚಿತ್ರಕ್ಕೆ ಮುಹೂರ್ತ ಯೋಗವೇ ಕೂಡಿ ಬರುತ್ತಿಲ್ಲ. ಚನ್ನಪ್ಪನ ಪಾತ್ರದಲ್ಲಿ ಮಿಂಚುವ ಕುಮಾರನ ಕನಸು ಹೀಗೆ ಕಮರಿ ಹೋಗುವುದೇ ಅಂತ ಅವರ ಪ್ರೀತಿ ಪಾತ್ರರು ಬೇಸರದಿಂದ ಆಡಿಕೊಳ್ಳುತ್ತಿದ್ದಾರೆ.