ಜನ ಹಿಂದೆಲ್ಲಾ ಸಿನಿಮಾ ಅಂದರೆ ಸಾಯ್ತಾ ಇದ್ರು. ಹಣ ಇಲ್ಲದಿದ್ದರೂ, ಒಂದು ಹೊಸ ಸಿನಿಮಾ ಬಂದಿದೆ ಅಂದರೆ ಊರಿಂದ ಬಂಡಿ ಕಟ್ಟಿಕೊಂಡು ಹತ್ತಾರು ಜನ ಪಟ್ಟಣಕ್ಕೆ ಬಂದು ಚಿತ್ರ ನೋಡಿ ಹೋಗುತ್ತಿದ್ದರು. ಅಂದಿನ ಬ್ಲ್ಯಾಕ್ ಅಂಡ್ ವೈಟ್ ಕಾಲದ ಚಿತ್ರವನ್ನು ನೋಡೋಕೆ ಬರ್ತಾ ಇದ್ದ ಜನ ಇಂದು ಏಕೆ ಇಲ್ಲ ಎನ್ನುವ ಚರ್ಚೆ ಗಾಂಧಿನಗರದಲ್ಲಿ ಸದಾ ನಡಿತಾ ಇರುತ್ತವೆ.
ಅದಕ್ಕೆ ಇರಬೇಕು ದೇವದಾಸ್ ಚಿತ್ರತಂಡ ಜನರಿಗೆ ಹೊಸದೊಂದು ಆಫರ್ ಘೋಷಿಸಿದೆ. ರೋಹಿಣಿ ಕ್ರಿಯೇಷನ್ಸ್ ಅವರ, ಎಚ್.ಎಂ. ಕೃಷ್ಣಮೂರ್ತಿ ನಿರ್ಮಾಣದ ಎಬಿಸಿಡಿ ಶಾಂತಕುಮಾರ್ ಅವರು ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ ದೇವದಾಸ್ ಚಿತ್ರದ ಕುರಿತ ಕಥೆ ಇದು. ಲೂಸ್ ಮಾದ ಯೋಗೀಶ್ ಹಾಗೂ ಜಿನಾಲ್ ಪಾಂಡ್ಯ ತಾರಾಗಣದ ಈ ಚಿತ್ರದ ವಿಶೇಷತೆ ಏನು ಗೊತ್ತೇ, ಉಚಿತ ಆಡಿಯೋ ಸಿಡಿ, ಸಿನಿಮಾ ಟಿಕೆಟ್ ಫ್ರೀ, ಜತೆಗೆ ಬಹುಮಾನಗಳನ್ನು ಗೆಲ್ಲುವ ಸುವರ್ಣಾವಕಾಶ. ಇಷ್ಟು ಸಿಕ್ಕರೆ ಜನ ಸುಮ್ಮನೆ ಕೂರಲ್ಲ, ಖಂಡಿತವಾಗಿಯೂ, ಚಿತ್ರ ಮಂದಿರದತ್ತ ಓಡಿ ಬರುತ್ತಾರೆ ಎಂಬುದು ದೇವದಾಸ್ ಚಿತ್ರತಂಡದ ಲೆಕ್ಕಾಚಾರ.
ಬಹುಮಾನವಾದರೂ ಸಣ್ಣದೇನಲ್ಲ! ಮಾರುತಿ ಆಲ್ಟೊ ಕಾರು, ಆಟೋರಿಕ್ಷಾ, ಹೋಂಡಾ ಆಕ್ಟಿವಾ ಸ್ಕೂಟರ್, ಕಂಪ್ಯೂಟರ್, ಟಿವಿ, ರೆಫ್ರಿಜಿರೇಟರ್, ಡಿವಿಡಿ ಪ್ಲೇಯರ್, ವಾಷಿಂಗ್ ಮಷಿನ್, ಮಿಕ್ಸಿ ಇತ್ಯಾದಿ. ಇವನ್ನೆಲ್ಲಾ ಕೊಳ್ಳಲು ಕೇವಲ 99 ರೂ. ಮೊತ್ತದ ದೇವದಾಸ್ ಅದೃಷ್ಟದ ಕೂಪನ್ ಕೊಂಡರೆ ಸಿಗುತ್ತದೆ. ಇದನ್ನು ನಿಮ್ಮ ಕೇಬಲ್ ಆಪರೇಟರ್ ಅಥವಾ ಊರಿನ ಸಿಡಿ ಅಂಗಡಿಗಳಲ್ಲಿ ಪಡೆಯಬಹುದಾಗಿದೆ.
ಈ ರೀತಿ ಜನ ಚಿತ್ರರಂಗದತ್ತ ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡುವ ಯತ್ನದಲ್ಲಿ ಕನ್ನಡ ಚಿತ್ರರಂಗ ಹೊರಟಿದೆ. ಈ ಎಲ್ಲಾ ಕಸರತ್ತುಗಳಿಗೆ ಯಶಸ್ಸು ಸಿಗುತ್ತಾ ಇಲ್ಲವಾ ಕಾಲವೇ ಹೇಳಬೇಕು.