ರಾಜಕಾರಣಿಯಾಗಿ ಹೆಸರು ಮಾಡಿದ್ದ ಬಿ.ಟಿ. ಲಲಿತಾ ನಾಯಕ್ ಚಿತ್ರ ನಿರ್ಮಾಣದತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಈಗಾಗಲೇ ಒಂದು ಲಂಬಾಣಿ ಭಾಷೆಯ ಚಿತ್ರ ಮಾಡಲು ಮುಂದಾಗಿರುವುದು ನಿಮಗೆಲ್ಲಾ ಗೊತ್ತಿದೆ. ಇದೀಗ ಇನ್ನೊಂದು ಕನ್ನಡ ಚಿತ್ರವನ್ನೂ ಮಾಡಲು ಮುಂದಾಗಿದ್ದಾರೆ.
ನಿರ್ಮಾಣದ ಜೊತೆ ನಟನೆಯನ್ನೂ ಇವರು ಮಾಡಲು ಮುಂದಾಗಿರುವ ಹೊಸ ಚಿತ್ರಕ್ಕೆ ಇನ್ನೂ ಹೆಸರಿಡುವ ಕಾರ್ಯ ಆಗಿಲ್ಲ. ಜೀವನದಲ್ಲಿ ಎದುರಾಗುವ ಅಶಾಂತಿಯನ್ನು ಈ ಚಿತ್ರ ಬಿಂಬಿಸುತ್ತದೆ. ರಾಜಕೀಯ ಹಾಗೂ ಚಿತ್ರರಂಗಕ್ಕೂ ನಂಟು ಇದೆ ಎನ್ನುವುದನ್ನು ಈ ಚಿತ್ರ ತೋರಿಸುವ ಯತ್ನ ಮಾಡಲಿದೆ. ಇವೆರಡೂ ಬದುಕಿನ ನಡುವಿನ ಸಾಮ್ಯತೆ ಮೇಲೆ ಬೆಳಕು ಚೆಲ್ಲಲಿದೆ.
ಸಮಾಜದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲ. ತನ್ನನ್ನು ತಾನು ಕಾಪಾಡಿಕೊಳ್ಳಲು ಹೋಗಿ, ಆಗದೇ ಮಾನಸಿಕ ರೋಗಿಯಾಗುವ ಮಹಿಳೆಯ ಕಥೆ ಇದಾಗಿದೆ. ಇವಳ ಮೇಲಾಗುವ ದೌರ್ಜನ್ಯ ಅವಳ ಕುಟುಂಬದ ಮೇಲೆ ಯಾವ ಪರಿಣಾಮ ಬೀರುತ್ತದೆ, ಯಾವ ರೀತಿ ಸಂಕಷ್ಟಗಳು ಎದುರಾಗುತ್ತವೆ ಎನ್ನುವುದನ್ನು ಚಿತ್ರದಲ್ಲಿ ಸಚಿತ್ರವಾಗಿ ತೋರಿಸಲಾಗುತ್ತದೆಯಂತೆ.
ಇದೊಂದು ಕೌಟುಂಬಿಕ ಚಿತ್ರ. ನಾಯಕಿಯಾಗಿ ಅನುಪಮಾ ನಟಿಸುತ್ತಿದ್ದಾರೆ. ಮನೆ ಸೊಸೆಯ ಪಾತ್ರ ಇವರದ್ದು. ನಾಯಕ ನಟ ಹಾಗೂ ನಿರ್ದೇಶಕರಾಗಿ ಓಂಪ್ರಕಾಶ್ ರಾವ್ ನಟಿಸಲಿದ್ದಾರೆ. ಚಿತ್ರದಲ್ಲಿ ಇತ್ತೀಚೆಗೆ ದೇಶಭಕ್ತಿ ಮರೆಯಾಗುತ್ತಿದೆ. ಎಲ್ಲೂ ಬಿಂಬಿತವಾಗುತ್ತಿಲ್ಲ. ಆದರೆ ಈ ಚಿತ್ರದಲ್ಲಿ ಒಂದು ದೇಶಭಕ್ತಿಯ ಹಾಡನ್ನು ಇರಿಸಲಾಗಿದೆಯಂತೆ. ಹಾಡಿನ ಶೂಟಿಂಗ್ ಸಹ ಮುಗಿದು ಹೋಗಿದೆಯಂತೆ. ಇದನ್ನು ರಾಜೇಶ್ ಕೃಷ್ಣನ್ ಹಾಗೂ ಚೇತನ್ ಹಾಡಿದ್ದಾರೆ. ಮಂಜುನಾಥ್ ಕಥೆ, ಚಿತ್ರಕಥೆ ಬರೆದಿದ್ದಾರೆ.