ಸುದೀಪ್ ಹಾಗೂ ಐಂದ್ರಿತಾ ರೇ ಜೋಡಿಯ, ಅಂಬರೀಷ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಬಹುನಿರೀಕ್ಷೆಯ ಚಿತ್ರ ವೀರ ಪರಂಪರೆ ಬಗ್ಗೆ ಇತ್ತೀಚೆಗೆ ಸುದ್ದಿಯೇ ಇಲ್ಲವಲ್ಲ ಅಂದುಕೊಂಡವರಿಗೆ ಒಂದು ಸಿಹಿಸುದ್ದಿ ಕಾದಿದೆ. ಚಿತ್ರತಂಡ ದೇಶವನ್ನೇ ಬಿಟ್ಟು ದೂರ ತೆರಳಿದೆ. ಸದ್ಯ ಚಿತ್ರತಂಡ ಮಲೇಷ್ಯಾದಲ್ಲಿದೆ ಎನ್ನುವ ಸುದ್ದಿ ಸಿಕ್ಕಿದೆ.
ಹೌದು. ಚಿತ್ರದ ಕೆಲ ಭಾಗದ ಚಿತ್ರೀಕರಣ ಮಲೇಷ್ಯಾದಲ್ಲಿ ಆಗಬೇಕಿರುವುದರಿಂದ ತಂಡ ಸದ್ಯ ಅಲ್ಲಿ ತೆರಳಿ ಚಿತ್ರೀಕರಣದಲ್ಲಿ ಬ್ಯುಸಿ ಆಗಿದೆ. ನಾಯಕಿಯೊಂದಿಗೆ ಸುದೀಪ್ ಹಾಡೊಂದರಲ್ಲಿ ಪಾಲ್ಗೊಂಡಿರುವ ಚಿತ್ರೀಕರಣ ಸದ್ಯ ಅಲ್ಲಿ ನಡೆಯುತ್ತಿದೆ. ಕಲಾ ಸಾಮ್ರಾಟ್ ಎಸ್. ನಾರಾಯಣ್ ನಿರ್ಮಾಣದ ಬಹುನಿರೀಕ್ಷೆಯ ಚಿತ್ರ ಇದಾಗಿದ್ದು, ಇದರ ಜತೆ ಇವರ 30 ನೇ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ಇದರಿಂದ ನಾರಾಯಣ್ಗೂ ಇದೊಂದು ಮಹತ್ವದ ಚಿತ್ರವಾಗಿದೆ ಎನ್ನುವಲ್ಲಿ ಸಂಶಯವೇ ಇಲ್ಲ.
ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಇದೊಂದು ಹಾಡು ಮುಗಿಯುವುದು ಬಾಕಿ ಇದೆ. ಇದಾದ ಮೇಲೆ ತಾಂತ್ರಿಕ ಕೆಲಸಗಳನ್ನು ಪೂರೈಸಿ ಚಿತ್ರ ಸೆನ್ಸಾರ್ ಕಾಣಲಿದೆ. ನಂತರ ಪ್ರೇಕ್ಷಕರೆದುರು ಬರಲಿದೆ.
ಚೆಲುವಾಂಬಿಕಾ ಪಿಕ್ಚರ್ಸ್ ಲಾಂಛನದ ಅಡಿ ನಾರಾಯಣ್ ಈ ಚಿತ್ರ ತರುತ್ತಿದ್ದಾರೆ. ಎಂದಿನಂತೆ ಕಥೆ, ಚಿತ್ರಕಥೆ, ಸಂಭಾಷಣೆ ಜತೆ ನಿರ್ದೇಶನವೂ ಇವರದ್ದೇ. ಚಿತ್ರದ ಶೂಟಿಂಗ್ ಈಗಾಗಲೇ ಗುಲ್ಬರ್ಗಾ, ಬೆಳಗಾಗಿ, ಕಿತ್ತೂರು, ಮಂಡ್ಯ ಹಾಗೂ ಮೈಸೂರಿನಲ್ಲಿ ನಡೆದಿದೆ. ವಿ. ಹರಿಕೃಷ್ಣ ಸಂಗೀತ ಹಾಗೂ ಆರ್.ಗಿರೀಶ್ ಛಾಯಾಗ್ರಹಣ ಚಿತ್ರಕ್ಕೆ ಲಭಿಸಿದೆ.