ಅಜಯ್ ರಾವ್ ಮ್ಯಾರೇಜ್ ಸುದ್ದಿಯೀಗ ಸದ್ಯದ ಹಾಟ್ ನ್ಯೂಸ್! 'ಅರೆರೆ, ಈ ಪಕ್ಕದ್ಮನೆ ಹುಡುಗನಂತಿರುವ ಅಜಯ್ ಮದುವೆಯಾಗ್ತಿದ್ದಾರಾ, ಹುಡುಗಿ ಯಾರ್ರೀ..?' ಅಂತೆಲ್ಲಾ ಕೇಳ್ಬೇಡ್ರೀ..! ಯಾಕೆಂದ್ರೆ ಹುಡುಗಿಯಿನ್ನೂ ಪಕ್ಕಾಗಿಲ್ಲ. ಆದರೆ ಮದುವೆಯಾಗುತ್ತಿರೋದು ಮಾತ್ರ ಖರೇ. ಅದೂ ಸದ್ಯದಲ್ಲೇ!
ಇದೇನಪ್ಪಾ, ಸಿಕ್ಕಾಪಟ್ಟೆ ಕನ್ಫ್ಯೂಷನ್ ಮಾಡ್ತಾ ಇದ್ದಾರಲ್ರೀ ಅಂತ ತಲೆ ಕೆಡಿಸಬೇಡಿ. ಭರ್ಜರಿ ಯಶಸ್ಸು ಗಳಿಸಿದ ಕೃಷ್ಣನ್ ಲವ್ ಸ್ಟೋರಿಯನ್ನು ಕಂಡಿದ್ದಾಗಿದೆಯಲ್ಲ, ಇನ್ನೀಗ ಮ್ಯಾರೇಜ್ ಸ್ಟೋರಿಯನ್ನೂ ನೋಡೋ ಸರದಿ ನಿಮ್ಮದು!
ವಿಷಯ ಸಿಂಪಲ್. ಇದು ಅಜಯ್ ರಾವ್ ಅವರ ಹೊಸ ಚಿತ್ರದ ಕಥೆ. ಚಿತ್ರದ ಹೆಸರು ಕೃಷ್ಣನ್ ಮ್ಯಾರೇಜ್ ಸ್ಟೋರಿ! ಇದೇ ಅಕ್ಟೋಬರ್ 17ಕ್ಕೆ ಈ ಚಿತ್ರ ಸೆಟ್ಟೇರಲಿದೆ. ಅಂದಹಾಗೆ ಈ ಚಿತ್ರ ಕೃಷ್ಣನ್ ಲವ್ ಸ್ಟೋರಿಯ ಎರಡನೇ ಭಾಗವಾ ಅಂತ ಕೇಳಬೇಡಿ. ಯಾಕಂದ್ರೆ ಇದರ ನಿರ್ಮಾಪಕ, ನಿರ್ದೇಶಕರಿಗೂ ಕೃಷ್ಣನ್ ಲವ್ ಸ್ಟೋರಿಗೂ ಯಾವುದೇ ಸಂಬಂಧ ಇಲ್ಲ. ಅರ್ಥಾತ್, ಇದರ ನಿರ್ದೇಶಕ ಶಶಾಂಕ್ ಅಂತೂ ಅಲ್ಲವೇ ಅಲ್ಲ. ಕೃಷ್ಣನ್ ಮ್ಯಾರೇಜ್ ಸ್ಟೋರಿಯನ್ನು ಉಮೇಶ್ ಎಂಬ ಹೊಸ ನಿರ್ದೇಶಕರು ಆಕ್ಷನ್ ಕಟ್ ಹೇಳಲಿದ್ದು, ಆರ್. ವಿಜಯಕುಮಾರ್ ಎಂಬ ಹೊಸ ನಿರ್ಮಾಪಕರೊಬ್ಬರು ಬಂಡವಾಳ ಹೂಡಲಿದ್ದಾರೆ.
ಅಂದೊಮ್ಮೆ ಎಕ್ಸ್ಕ್ಯೂಸ್ಮಿ ಚಿತ್ರದಲ್ಲಿ ಯಶಸ್ಸು ಪಡೆದರೂ ಮತ್ತೆ ತೋಪು ಚಿತ್ರಗಳ ಮೂಲಕ ಚಲಾವಣೆಯನ್ನೇ ಕಾಣದ ನಟರಾದ ಕೆಟ್ಟ ಅನುಭವ ಅಜಯ್ ಜೊತೆಗಿದೆ. ತಾಜ್ ಮಹಲ್ ಚಿತ್ರ ಇವರಿಗೆ ಮರು ಜನ್ಮ ನೀಡಿದರೂ, ನಂತರ ಪ್ರೇಮ್ಕಹಾನಿಯಲ್ಲಿ ಬಿದ್ದರು. ಈಗ ಮತ್ತೆ ಕೃಷ್ಣನ್ ಲವ್ ಸ್ಟೋರಿಯಲ್ಲಿ ಎದ್ದಿದ್ದಾರೆ. ಸಂತೆಯಲ್ಲಿ ನಿಂತರೂನು ನೋಡು ನೀನು ನನ್ನನ್ನೇ... ನಾನಾಡದ ಮಾತು ನಿನ್ನಲಿದೆ... ಮೋಸ ಮಾಡಲೆಂದೆ ನೀನು ಬಂದೆಯಾ... ಎಂಬೆಲ್ಲ ಹಾಡುಗಳೂ ಜನರ ಬಾಯಲ್ಲಿ ದಿನನಿತ್ಯವೂ ಜಪವಾಗುತ್ತಿರುವುದಕ್ಕಿಂತ ಹೆಚ್ಚಿನ ಸಂತೋಷ ನಟನೊಬ್ಬನಿಗೆ ಯಾವುದಿದೆ ಹೇಳಿ..! ಹೌದು. ಅದೇ ಖುಷಿಯಲ್ಲೀಗ ಅಜಯ್ ರಾವ್ ಇದ್ದಾರೆ. ಈಗಷ್ಟೇ ಮತ್ತೆ ಯಶಸ್ಸು ಕಂಡಿರುವ ಅಜಯ್ ಹಿಂದೆ ಮಾಡಿದ ತಪ್ಪನ್ನು ಈಗ ಮಾಡದಿದ್ದರೆ ಸಾಕು ಬಿಡಿ.