ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಭಿಮಾನಿ ಹುಡುಗಿಯ ಗೌಜಿ-ಗದ್ದಲಕ್ಕೆ ಕಂಗಾಲಾದ ಪುನೀತ್ (Punith Rajkumar | Mysore | Jackie | Namritha)
ಸುದ್ದಿ/ಗಾಸಿಪ್
Bookmark and Share Feedback Print
 
ತಮ್ಮ ಮೆಚ್ಚಿನ ನಟನನ್ನು ಮುಟ್ಟಬೇಕು, ತಟ್ಟಬೇಕು, ಕೈಕುಲುಕಬೇಕು ಎಂದು ಸಾವಿರಾರು ಮಂದಿ ನೂಕು ನುಗ್ಗಲು ನಡೆಸುತ್ತಿರುವಾಗ ಬದಿಯಲ್ಲಿ ನಿಂತಿದ್ದ ಹುಡುಗಿಯೊಬ್ಬಳು ಗೋಳೋ ಎಂದು ಅಳುತ್ತಿದ್ದಳು. ಆಕೆಯ ಬಯಕೆ ಮಳಿಗೆಯ ಒಳಗಿದ್ದ ನಟನನ್ನು ಕಣ್ತುಂಬ ನೋಡಬೇಕು, ಬಾಯ್ತುಂಬ ಮಾತನಾಡಿಸಬೇಕು ಮತ್ತು ಅಪ್ಪಿಕೊಳ್ಳಬೇಕೆಂಬುದು.
PR

ಖಾಸಗಿ ಮಳಿಗೆಯೊಂದರ ಉದ್ಘಾಟನೆಗೆಂದು ಗುರುವಾರ ಮೈಸೂರಿಗೆ ತೆರಳಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಇಂತಹ ವಿಶಿಷ್ಟ ಅನುಭವವೊಂದು ಎದುರಾಯಿತು. ರಂಪಾಟ ನಡೆಸಿದ ಅಭಿಮಾನಿಯನ್ನು ಮಗುವಿನಂತೆ ಸಂತೈಸುವ ಪಾಳಿ ಅವರದ್ದಾಗಿತ್ತು.

ಮೈಸೂರು ನಟರಾಜ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ನಮ್ರತಾ ಎಂಬಾಕೆಯೇ ಪುನೀತ್ ಹುಚ್ಚು ಅಭಿಮಾನಿ. ತನ್ನ ಅಭಿಲಾಷೆಯಂತೆ ನೆಚ್ಚಿನ ನಟನನ್ನು ಮಾತನಾಡಿಸಿ, ಕಣ್ಣೀರ ಕೋಡಿ ಹರಿಸಿ, ಅಪ್ಪಿಕೊಂಡು ತೃಪ್ತಳಾಗಿದ್ದಾಳೆ ಅಂದುಕೊಂಡಿದ್ದರೆ, ಅದು ಸುಳ್ಳು. ಆಕೆಗೆ ಸಿಕ್ಕ ಅವಕಾಶ ಕಡಿಮೆಯಾಯಿತೆಂದು ಪುನೀತ್ ಹೋದ ನಂತರವೂ ನಮ್ರತಾ ಕಣ್ಣಿಂದ ಧಾರಾಕಾರವಾಗಿ ಗಂಗೆ ಹರಿಯುತ್ತಿದ್ದಳು.

ಅಭಿಮಾನಿಗಳಿಂದ ತಪ್ಪಿಸಿಕೊಂಡು ಪುನೀತ್ ಮಳಿಗೆ ಒಳಗೆ ಹೋದ ನಂತರ ರಸ್ತೆ ಬದಿಯಲ್ಲಿ ನಿಂತಿದ್ದ ಯುವತಿಯೊಬ್ಬಳು ಒಂದೇ ಸಮನೆ ಅಳುತ್ತಿದ್ದುದನ್ನು ಕಂಡ ಪೊಲೀಸರಿಗೂ ಕರುಳು ಚುರುಕ್ ಅಂದಿರಬೇಕು. ಸ್ವತಃ ಪೊಲೀಸರೇ ಮುಂದಾಗಿ ಆಕೆಯನ್ನು ಪುನೀತ್ ಜತೆ ಭೇಟಿ ಮಾಡಿಸಿದ್ದರು.

ಆನಂದತುಂದಿಲಳಾದ ಅಭಿಮಾನಿ ನಮ್ರತಾ, ಪುನೀತ್‌ರನ್ನು ಪ್ರೀತಿಯಿಂದ ಅಪ್ಪಿಕೊಂಡಳು. ಅಟೋಗ್ರಾಫ್ ಪಡೆದುಕೊಂಡಳು. ಪವರ್ ಸ್ಟಾರ್ ಮಗುವಿನಂತೆ ಅಭಿಮಾನಿಯನ್ನು ಸಮಾಧಾನ ಪಡಿಸಿದರು. ಆದರೂ ಪುನೀತ್ ಅವರನ್ನು ಅಲ್ಲಿಂದ ಕಳಚಿಕೊಳ್ಳಲು ಅಭಿಮಾನಿ ಬಿಡಲಿಲ್ಲ. ಇನ್ನಷ್ಟು ಹೊತ್ತು ಪುನೀತ್ ಜತೆ ಕಳೆಯಬೇಕೆನ್ನುವುದು ಆಕೆಯ ಬಯಕೆಯಾಗಿತ್ತು.

ಆದರೆ ನಿಗದಿಯಾಗಿರುವ ಇನ್ನಷ್ಟು ಕಾರ್ಯಕ್ರಮಗಳು ಇರುವುದರಿಂದ ಹೋಗಲೇಬೇಕು. ಇನ್ನೊಮ್ಮೆ ಮೈಸೂರಿಗೆ ಚಿತ್ರೀಕರಣಕ್ಕೆಂದು ಬಂದಾಗ ಮಾತನಾಡುವಿಯಂತೆ ಎಂದು ಪುನೀತ್ ಜಾರಿಕೊಂಡರು.

ದೇವರಾಜ್ ಅರಸ್ ರಸ್ತೆಯಲ್ಲಿನ ಖಾಸಗಿ ಮಳಿಗೆಯ ಉದ್ಘಾಟನೆಗೆ ಪುನೀತ್ ಬರುತ್ತಾರೆ ಎಂಬ ಸುದ್ದಿಯನ್ನು ತಿಳಿದುಕೊಂಡಿದ್ದ ಸಾವಿರಾರು ಅಭಿಮಾನಿಗಳು ಹೊರಗಡೆ ರಸ್ತೆಯಲ್ಲಿ ಜಮಾಯಿಸಿದ್ದರು. ಪುನೀತ್ ಬರುತ್ತಿದ್ದಂತೆ ಜೈಕಾರ ಹಾಕುತ್ತಾ, ಪವರ್ ಸ್ಟಾರ್ ಹೇಗಿದ್ದಾರೆಂದು ಹತ್ತಿರದಿಂದ ನೋಡಲು ಅಭಿಮಾನಿಗಳು ಮುಗಿ ಬಿದ್ದರು.

ಎಷ್ಟೇ ಮನವಿಗಳನ್ನು ಮಾಡಿಕೊಂಡರೂ ಯಾರೊಬ್ಬರೂ ಕಿವಿಗೆ ಹಾಕಿಕೊಳ್ಳಲಿಲ್ಲ. ನಿಯಂತ್ರಿಸಲು ಪೊಲೀಸರು ಪಟ್ಟ ಶ್ರಮಗಳೂ ವ್ಯರ್ಥವಾದಾಗ ಒಂದು ಹಂತದಲ್ಲಿ ಲಘು ಲಾಠಿ ಪ್ರಹಾರವನ್ನೂ ಮಾಡಲಾಯಿತು.

ಲಾಠಿ ರುಚಿ ತಿಂದರೂ ತಣ್ಣಗಾಗದ ಅಭಿಮಾನಿಗಳು ಪುನೀತ್ ಕೈ ಕುಲುಕಬೇಕು, ಅಟೋಗ್ರಾಫ್ ಪಡೆಯಬೇಕು ಎಂದು ನೂಕು-ನುಗ್ಗಲು ನಡೆಸುವುದನ್ನು ಬಿಡಲಿಲ್ಲ.

ಬಳಿಕ ಅವರು ದುನಿಯಾ ಸೂರಿ ನಿರ್ದೇಶನದ ತನ್ನ 'ಜಾಕಿ' ಚಿತ್ರ ಪ್ರದರ್ಶನವಾಗುತ್ತಿರುವ 'ಸಂಗಮ' ಚಿತ್ರಮಂದಿರಕ್ಕೆ ಭೇಟಿ ನೀಡಿದರು. ಕೆಲಕಾಲ ಚಿತ್ರವನ್ನು ವೀಕ್ಷಿಸಬೇಕು ಎನ್ನುವುದು ಅವರ ಬಯಕೆಯಾಗಿತ್ತು. ಆದರೆ ಅಭಿಮಾನಿಗಳ 'ಕಾಟ'ದಿಂದಾಗಿ ತನ್ನ ಕಾರ್ಯಕ್ರಮವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಹೋಗಬೇಕಾಯಿತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪುನೀತ್ ರಾಜ್ಕುಮಾರ್, ಮೈಸೂರು, ಜಾಕಿ, ನಮ್ರತಾ, ಕನ್ನಡ ಸಿನಿಮಾ