ಸಿನಿಮಾವೆಂದರೆ ಭಿನ್ನವಾಗಿರಬೇಕು ಎನ್ನುವುದು ನಿರ್ದೇಶಕ ವೀರೇಶ್ ದೊಡ್ಡಬಳ್ಳಾಪುರ ಮಾತು. ಅದೇ ನಿಟ್ಟಿನಲ್ಲಿ ಅವರು ತನ್ನ ಚಿತ್ರ 'ಮಾಯದಂಥ ಮಳೆ'ಯಲ್ಲಿ ಹೆಣ್ಮಕ್ಕಳ ಅಪ್ಪನಿಗೆ ಮದುವೆ ಮಾಡಿಸಲು ಹೊರಟಿದ್ದಾರೆ. ಪುತ್ರಿಯರಾದ ಭಾವನಾ ರಾವ್ ಮತ್ತು ಋತುವಿಗೆ ತಂದೆಗೆ ಹುಡುಗಿ ಹುಡುಕುವ ಕೆಲಸವನ್ನು ವಹಿಸಿದ್ದಾರೆ.
ಹೌದು, ಮೊನ್ನೆ ತಾನೇ ಬೆಂಗಳೂರಿನ ಮಲ್ಲೇಶ್ವರಂ ಬೀದಿಗಳಲ್ಲಿ ಮಗಳಂದಿರು ಅಪ್ಪನಿಗೆ ಹುಡುಗಿ ಹುಡುಕಿದ್ದಾರೆ. ಅರೆ ನರೆತ ಅಪ್ಪನಿಗೆ ಅದೆಂಥಾ ಹುಡುಗಿ ಬೇಕೆಂದು ಮಕ್ಕಳು ಹುಡುಕುತ್ತಿದ್ದಾರೆ ಎಂದರೆ ನಿರ್ದೇಶಕರು ಸುಮ್ಮನೆ ನಗುತ್ತಾರೆ.
ಗಂಗಾ ಪರಮೇಶ್ವರಿ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ನಿರ್ಮಾಪಕರು ಕೆರೆಮಲು ಬದ್ರಿ. ನಿರ್ದೇಶಕರು ಮತ್ತು ನಿರ್ಮಾಪಕರು ಸಮಾನ ಮನಸ್ಕರಾಗಿರುವುದರಿಂದ ಯಾವುದೇ ಸಮಸ್ಯೆ ಎದುರಾಗಿಲ್ಲವಂತೆ.
ಮೊದಲ ಬಾರಿ ನಿರ್ದೇಶನಕ್ಕೆ ಕೈ ಹಾಕಿರುವ ವೀರೇಶ್ ಸ್ವತಃ ಕಥೆ ಬರೆದಿದ್ದಾರೆ. ಚಿತ್ರಕಥೆ, ಸಂಭಾಷಣೆಯೂ ಅವರದ್ದೆ. ಎ.ಸಿ. ಮಹೇಂದ್ರನ್ ಕ್ಯಾಮರಾ ಹಿಡಿದಿದ್ದರೆ, ಕೆಂಪರಾಜು ಸಂಕಲನಕಾರರಾಗಿದ್ದಾರೆ.
ಮ್ಯೂಸಿಕ್ ಮೋಹನ್ ಅವರ ಸಂಗೀತಕ್ಕೆ ಹಾಡುಗಳನ್ನು ಪೋಣಿಸಿರುವವರು ಕವಿರಾಜ್, ಕಲ್ಯಾಣ್, ವಿ. ನಾಗೇಂದ್ರ ಪ್ರಸಾದ್ ಮತ್ತು ಮಂಜುನಾಥ ರಾವ್. ಇದನ್ನು ಸುಶ್ರಾವ್ಯವಾಗಿ ಹಾಡಿರುವವರು ಸೋನು ನಿಗಂ, ಶ್ರೇಯಾ ಘೋಷಾಲ್, ಹೇಮಂತ್, ಚಿತ್ರಾ.