ಕುಮಾರ್ ರಿಮೇಕ್ ಪರ್ವದಲ್ಲಿ ಪ್ರಜ್ವಲ್, ಸುದೀಪ್, ರವಿಚಂದ್ರನ್
ಬುಧವಾರ, 17 ನವೆಂಬರ್ 2010( 18:02 IST )
MOKSHA
ಇತ್ತೀಚಿನ ವರ್ಷಗಳಲ್ಲಿ ಸ್ವಮೇಕಿಗಿಂತ ರಿಮೇಕ್ ಹಾವಳಿ ಜಾಸ್ತಿಯಾಗಿದೆ. ಇದು ಕನ್ನಡದಲ್ಲಿ ಮಾತ್ರವಲ್ಲ, ಎಲ್ಲ ಭಾಷೆಗಳಲ್ಲೂ ಇದ್ದದ್ದೇ. ಆದರೆ ಕನ್ನಡಕ್ಕೆ ಕೊಂಚ ಇದರ ಬಾಧೆ ಜಾಸ್ತಿ ಎಂದೇ ಹೇಳಬಹುದು. ಪರಭಾಷೆಯಲ್ಲಿ ಸೂಪರ್ ಹಿಟ್ ಆದ ಚಿತ್ರಗಳನ್ನು ಕಣ್ಮುಚ್ಚಿ ಕನ್ನಡಕ್ಕೆ ಭಟ್ಟಿ ಇಳಿಸಲು ಕೆಲವು ನಿರ್ಮಾಪಕ-ನಿರ್ದೇಶಕರು ಸಾಲುಗಟ್ಟಿ ನಿಲ್ಲುತ್ತಾರೆ.
ಅದಕ್ಕೆ ಸೇರ್ಪಡೆ ಎಂಬಂತೆ ಈಗ ನಿರ್ಮಾಪಕ, ವಿತರಕ ಎನ್. ಕುಮಾರ್ ಬರೋಬ್ಬರಿ ಮೂರು ಚಿತ್ರಗಳನ್ನು ರಿಮೇಕಿಸಲು ಹೊರಟಿದ್ದಾರೆ. ತೆಲುಗಿನ ರಣಂ, ಕಿಕ್ ಮತ್ತು ಸಿಂಹರಾಶಿ ಚಿತ್ರಗಳು ಕನ್ನಡಕ್ಕೆ ಶೀಘ್ರದಲ್ಲೇ ಬರಲಿವೆ.
ರಣಂ ಚಿತ್ರ ಕನ್ನಡದಲ್ಲಿ 'ಭದ್ರ'ನಾಗಿ ಬರಲಿದ್ದು, ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಲಿದ್ದಾರೆ. 'ಭದ್ರ' ಮುಗಿಯುತ್ತಿದ್ದಂತೆ 'ಕಿಕ್'ನಲ್ಲಿ ಸುದೀಪ್ ಹಾಗೂ 'ಸಿಂಹರಾಶಿ'ಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ತಲೆ ತೂರಿಸಲಿದ್ದಾರೆ. ಇವೆರಡೂ ಚಿತ್ರಗಳ ಹೆಸರುಗಳು ಮತ್ತು ನಿರ್ದೇಶಕರು ಯಾರೆಂಬುದು ಸದ್ಯದ ಮಟ್ಟಿಗೆ ಸೀಕ್ರೆಟ್!
ಇಲ್ಲಿ ಮತ್ತೊಂದು ಹೇಳಲೇಬೇಕಾದ ಪ್ರಸಂಗವಿದೆ. ಮೇಲಿನ ಮೂರು ರಿಮೇಕ್ ಚಿತ್ರಗಳನ್ನು ನಿರ್ಮಿಸುತ್ತಿರುವ ಮತ್ತು 'ಆಸ್ಕರ್' ಎಂಬ ಸ್ವಮೇಕ್ ಚಿತ್ರವನ್ನು ನಿರ್ಮಿಸಿರುವ ಎನ್. ಕುಮಾರ್, ಅದರ ನಿರ್ದೇಶಕ ಕೃಷ್ಣ ಮತ್ತು ಸ್ವಮೇಕ್ವಾದಿ ಶಿವು ಪಿ. ಬೆಳವಾಡಿ ಉಪಸ್ಥಿತಿಯಲ್ಲಿ ನಡೆದಿರುವ ಗಮ್ಮತ್ತಿದು.
ಏನೇ ಆದರೂ ರಿಮೇಕ್ ಚಿತ್ರಗಳನ್ನು ಮಾಡಬಾರದು, ಸ್ವಮೇಕ್ ಅನ್ನೇ ಮಾಡಬೇಕು ಎನ್ನುವ ನನ್ನ ಹಂಬಲ ಎಂದು 'ಆಸ್ಕರ್' ನಿರ್ದೇಶಕ ಕೃಷ್ಣ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಹೇಳಿಬಿಟ್ಟರು. ಇದನ್ನು ಕೇಳಿದ ನಿರ್ಮಾಪಕ ಕುಮಾರ್ ಹಿಂದೆ ಮುಂದೆ ನೋಡದೆ ಚಪ್ಪಾಳೆಯನ್ನೂ ಹೊಡೆದರು. ಪಕ್ಕದಲ್ಲಿ ನೋಡಿದರೆ ಸ್ವಮೇಕ್ವಾದಿ ಶಿವು ಗುರುಗುಟ್ಟಿಕೊಂಡು ನೋಡುತ್ತಿದ್ದರು.
ಕಾರಣ ಗೊತ್ತೇ ಇದೆಯಲ್ಲ. ಬರೋಬ್ಬರಿ ಮೂರು ಪರಭಾಷಾ ಚಿತ್ರಗಳನ್ನು ಕನ್ನಡದಲ್ಲಿ ಭಟ್ಟಿ ಇಳಿಸಲು ಹಕ್ಕುಗಳನ್ನು ತೆಗೆದುಕೊಂಡು, ಈಗ ಸ್ವಮೇಕ್ ಪರ ಚಪ್ಪಾಳೆ ಬಡಿದಾಗ ಯಾರಾದರೂ ಸುಮ್ಮನಿರುತ್ತಾರೆ, ಹೌದು ತಾನೇ?