ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಳ್ಳಾರಿ ರೆಡ್ಡಿ ಸಹೋದರರ ಚಿತ್ರದಲ್ಲಿ ಪುನೀತ್ ಹೀರೋ? (Reddy brothers | Sandalwood | Shivarajkumar | Puneet Rajkumar)
ಬಳ್ಳಾರಿ ರೆಡ್ಡಿ ಸಹೋದರರ ವಿರುದ್ಧ ಕತ್ತಿ ಮಸೆಯುವ 'ಪೃಥ್ವಿ' ಚಿತ್ರದಲ್ಲಿ ನಟಿಸಿದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಈಗ ಅವರೇ ನಿರ್ಮಿಸುವ ಚಿತ್ರದಲ್ಲಿ ನಟಿಸಲಿದ್ದಾರೆಯೇ? ಹಾಗಂತ ಸುದ್ದಿಯೊಂದು ಹರಿದಾಡುತ್ತಿದೆ. ಬರೇ ಸುದ್ದಿಯಾಗಿ ಇದು ಉಳಿದಿಲ್ಲ. ಯಾಕೆಂದರೆ ಸ್ವತಃ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಖಚಿತಪಡಿಸಿದ್ದಾರೆ!
PR

ಹೌದು, ರೆಡ್ಡಿ ಸಹೋದರರಿಗಾಗಿ ಚಿತ್ರವೊಂದನ್ನು ಮಾಡುವ ಕುರಿತು ನನ್ನ ಸಹೋದರ ಪುನೀತ್ ರಾಜ್‌ಕುಮಾರ್ ಈಗಾಗಲೇ ಒಪ್ಪಿಗೆ ನೀಡಿದ್ದಾನೆ. ಈ ಕುರಿತು ಮಾತುಕತೆಗಳು ನಡೆಯುತ್ತಿವೆ. ಇನ್ನೂ ಅಂತಿಮಗೊಂಡಿಲ್ಲ ಎಂದು ಇತ್ತೀಚೆಗಷ್ಟೇ ಪತ್ರಕರ್ತರ ಜತೆ ಮಾತನಾಡುತ್ತಾ ಶಿವಣ್ಣ ತಿಳಿಸಿದ್ದಾರೆ.

ಕರ್ನಾಟಕ ರಾಜಕೀಯದಲ್ಲಿ ಮತ್ತು ಗಣಿಗಾರಿಕೆಯಲ್ಲಿ ಪ್ರಾಬಲ್ಯ ಹೊಂದಿರುವ ಜನಾರ್ದನ ರೆಡ್ಡಿ ಸಮೂಹದ ಚಿತ್ರದಲ್ಲಿ ನಟಿಸಲು ನನ್ನದೇನೂ ಅಭ್ಯಂತರವಿಲ್ಲ ಎಂದು ಅವರು ಹೇಳಿದರಾದರೂ, ರೆಡ್ಡಿ ಸಹೋದರರು ಯಾವ ರೀತಿಯಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದರು.

ರಾಜ್‌ಕುಮಾರ್ ಕುಟುಂಬ ಮತ್ತು ಬಳ್ಳಾರಿ ಸಂಬಂಧ ಹೊಸತೇನಲ್ಲ. ಈ ಹಿಂದಿನಿಂದಲೂ ರಾಜ್ ಕುಟುಂಬ ಆ ಜಿಲ್ಲೆಯ ಜತೆ ಆಪ್ತ ಸಂಬಂಧ ಹೊಂದಿದೆ. ಇತ್ತೀಚೆಗಷ್ಟೇ ಪಾರ್ವತಮ್ಮ ರಾಜ್‌ಕುಮಾರ್ ಅವರು ತನ್ನ ಮಕ್ಕಳಾದ ಶಿವಣ್ಣ, ಪುನೀತ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಜತೆ ಬಳ್ಳಾರಿಗೆ ತೆರಳಿ ರಾಜ್‌ಕುಮಾರ್ ಪುತ್ಥಳಿಯೊಂದನ್ನು ಅನಾವರಣಗೊಳಿಸಿದ್ದರು.

ಇನ್ನೊಂದು ಮೂಲದ ಪ್ರಕಾರ ಬಳ್ಳಾರಿ ರೆಡ್ಡಿಗಳು ಪುನೀತ್ ಚಿತ್ರದಲ್ಲಿ ನಿರ್ವಹಿಸುವ ಪಾತ್ರ ಯಾವುದು ಎನ್ನುವುದು ಖಚಿತವಾಗಿಲ್ಲ. ಅವರು ಚಿತ್ರ ನಿರ್ಮಿಸುತ್ತಾರೋ ಅಥವಾ ಯಾವುದಾದರೂ ಪಾತ್ರದಲ್ಲಿ ನಟಿಸಲಿದ್ದಾರೆಯೋ ಎಂಬುದು ನಿರ್ಧಾರವಾಗಬೇಕಿದೆ. ರಾಜಕಾರಣಿಗಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಹೊಸತಲ್ಲವಾದ್ದರಿಂದ ಈ ಸುದ್ದಿಯನ್ನೂ ಅಚ್ಚರಿ ಎಂದು ಪರಿಗಣಿಸಬೇಕಿಲ್ಲ.
ಇವನ್ನೂ ಓದಿ