ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬರಲಿದೆ ಸಖತ್ ಮನರಂಜನೆಯ 'ಮತ್ತೊಂದ್ ಮದುವೆನಾ' (Sandalwood | Kannada cinema,| Anantnag | Suhasini)
EVENT
ಭಾರೀ ಯಶಸ್ಸು ಕಂಡ ಎರಡನೇ ಮದುವೆ ಚಿತ್ರದಲ್ಲಿ ಮದುವೆ ಸಮಾರಂಭ ನಡೆಯುತ್ತಲೇ ತೆರೆ ಬಿದ್ದು ಚಿತ್ರ ಕೊನೆಗೊಳ್ಳುತ್ತದೆ. ಆದರೆ, ಮತ್ತೊಂದು ಮದುವೆನಾ? ಚಿತ್ರದ ಕಥೆ ಮದುವೆಯಿಂದಲೇ ಆರಂಭಗೊಳ್ಳುತ್ತದೆ. ಇದು ಆ ಚಿತ್ರದ ಮುಂದುವರಿಕೆಯಲ್ಲ. ಈ ಚಿತ್ರ ಪ್ರತ್ಯೇಕವಾಗಿ ನೋಡಿಸಿಕೊಳ್ಳುವ ಕಥಾ ಹಂದರವನ್ನು ಒಳಗೊಂಡಿದೆ. ಹಾಗಾಗಿ ಪ್ರೇಕ್ಷಕರಿಗೆ ಇಲ್ಲಿ ಸಖತ್ ಮನರಂಜನೆ ಖಚಿತ.

ನಿರ್ಮಾಪಕ ಉಮೇಶ್ ಬಣಕಾರ್ ಅವರ ಮತ್ತೊಂದ್ ಮದುವೆನಾ? ಚಿತ್ರದಲ್ಲಿ ವಯಸ್ಸಿಗೆ ಬಂದ ಮಕ್ಕಳೊಂದಿಗೆ ಪೋಷಕರು ಹೇಗೆ ನಡೆದುಕೊಳ್ಳಬೇಕು, ಹಾಗಿಲ್ಲದಿದ್ದರೆ ಏನೆಲ್ಲಾ ಅವಾಂತರಗಳಾಗುತ್ತವೆ ಎಂಬುದನ್ನು ತಿಳಿ ಹಾಸ್ಯದಲ್ಲಿ ನಿರ್ದೇಶಕ ದಿನೇಶ್ ಬಾಬು ಹೇಳ ಹೊರಟಿದ್ದಾರೆ. ಚಿತ್ರದಲ್ಲಿ ಅನಂತ್ ನಾಗ್-ಸುಹಾಸಿನಿಗೆ ಅಳಿಯನ ಪಾತ್ರದಲ್ಲಿ ನವೀನ್ ಕೃಷ್ಣ. ಅವರಿಗೆ ಜೋಡಿ ಪ್ರಿಯಾಂಕ. ಎರಡನೆ ಮದುವೆಯಲ್ಲಿನ ಪ್ರೇಮ್ ಪಾತ್ರವನ್ನು ಮತ್ತೊಂದು ಮದುವೆನಾ? ಚಿತ್ರದಲ್ಲಿ ನವೀನ್ ಮುಂದುವರಿಸಿದ್ದಾರೆ.

ಪ್ರಿಯಾಂಕಳನ್ನು ನವೀನ್ ಕೃಷ್ಣ ಮದುವೆಯಾದ ಬಳಿಕ ಮಗಳು-ಅಳಿಯನ ಮೇಲೆ ಅನಂತ್ ನಾಗ್-ಸುಹಾಸಿನಿಯರದು ಓವರ್ ಇನ್ವಾಲ್‌ಮೆಂಟ್. ಇದರಿಂದ ಅಳಿಯ ಪಡುವ ಫಜೀತಿ ಪ್ರಸಂಗಗಳನ್ನು ಪ್ರೇಕ್ಷಕರು ತೆರೆಯ ಮೇಲೆ ನೋಡಿ ಆನಂದಿಸಬಹುದು ಅಂತಾರೆ ನಿರ್ದೇಶಕ ದಿನೇಶ್ ಬಾಬು.

ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಅವರಿಗೆ ಈ ಹಾಸ್ಯಮಯ ಚಿತ್ರದಲ್ಲಿ ಲಾಯರ್ ಪಾತ್ರ. ಒಂದರ್ಥದಲ್ಲಿ ಸಮಸ್ಯೆಯ ಮೂಲ ಕಾರಣ ಮತ್ತು ಪರಿಹಾರ ಈ ಪಾತ್ರದ್ದೇ. ಒಟ್ಟಿನಲ್ಲಿ ಎಡವಟ್ಟು ಲಾಯರ್ ಆಗಿ ರಾಜು ತಾಳಿಕೋಟೆ ಅಭಿನಯ ಹಂಡ್ರೆಡ್ ಪರ್ಸೆಂಟ್ ಮನರಂಜನೆ. ಅನಂತ್ ನಾಗ್ ಅಳಿಯ ನವೀನ್ ಕೃಷ್ಣಾಗೆ ಮಕ್ಕಳಾಗುವುದಿಲ್ಲ ಎಂದು ಡಾಕ್ಟರ್ ಸರ್ಟಿಫಿಕೇಟ್ ಕೊಟ್ಟಿರುತ್ತಾರೆ. ಆದರೂ ಮಗಳು ಪ್ರಿಯಾಂಕಾ ಗರ್ಭವತಿಯಾಗುತ್ತಾಳೆ. ಇದೇ ಚಿತ್ರದ ಕಥನ ಕುತೂಹಲಕ್ಕೆ ಜೀವಾಳ. ಮುಂದೆ ಈ ಸಮಸ್ಯೆಯನ್ನು ಲಾಯರ್ ಸಾಹೇಬರು ಹೇಗೆ ಪರಿಹರಿಸುತ್ತಾರೆ ಎಂಬುದು ಪ್ರೇಕ್ಷಕರ ಕುತೂಹಲಕ್ಕೆ ಬಿಟ್ಟ ವಿಚಾರ.

ಮತ್ತೊಂದು ಮದುವೆನಾ? ಚಿತ್ರದಲ್ಲಿ ನುರಿತ ಕಲಾವಿದರು ಅದ್ದೂರಿಯಾಗಿ ಅಭಿನಯಿಸಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕ್ರತ ನಟಿ ತಾರಾ ಅವರ ಹಾಸ್ಯ ಸನ್ನಿವೇಶಗಳು ನವಿರಾಗಿ ಮೂಡಿವೆ. ಅವರ ಜೋಡಿಯಾಗಿ ಹಾಸ್ಯ ನಟ ಶರಣ್ ಎಂದಿನಂತೆ ತಮ್ಮ ಕಾಮಿಡಿ ಟ್ರ್ಯಾಕ್ ಮುಂದುವರಿಸಿದ್ದಾರೆ. ಅನಂತ್-ಸುಹಾಸಿನಿ ಮಗಳಾಗಿ ಅಭಿನಯಿಸಿರುವ ಪ್ರಿಯಾಂಕ, ತಾನು ಮಾಡದ ತಪ್ಪಿಗೆ ಅಪವಾದ ಕೇಳುವ ತಮಾಷೆ ಪ್ರಸಂಗಗಳು ಚಿತ್ರದಲ್ಲಿ ಸಾಕಷ್ಟಿವೆ. ಜೆನ್ನಿಫರ್ ಕೊತ್ವಾಲ್, ಸ್ವಸ್ತಿಕ್ ಶಂಕರ್ ಹಾಗೂ ಬಹುತೇಕ ಎರಡನೇ ಮದುವೆಯ ತಾರಾಬಳಗವೇ ಈ ಚಿತ್ರದಲ್ಲಿದೆ. ಗಿರಿಧರ್ ದಿವಾನ್ ಅವರ ಸಂಗೀತ ಹಾಗೂ ಸುರೇಶ್ ಭೈರಸಂದ್ರ ಅವರ ಛಾಯಾಗ್ರಹಣ ಆಹ್ಲಾದಕರವಾಗಿದೆ ಎನ್ನುತ್ತಾರೆ ನಿರ್ದೇಶಕ ದಿನೇಶ್ ಬಾಬು.
ಇವನ್ನೂ ಓದಿ