ನಿಮಾಪಕ ಕೆ. ಮಂಜು ನೋಡು ನೋಡುತ್ತಾ ಇಗಾಗಲೇ ಮೂವತ್ತಕ್ಕೂ ಹೆಚ್ಚು ಚಿತ್ರಗಳನ್ನು ತಯಾರಿಸಿದ್ದಾಗಿದೆ. ಇವರ 'ಜಾಲಿ ಬಾಯ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. 'ಹ್ಯಾಪಿ', 'ಶಿಕಾರಿ', 'ಗಾಡ್ ಫಾದರ್' ಚಿತ್ರಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ.
ಈಗ ಇದೆಲ್ಲವನ್ನೂ ಮೀರಿಸುವ ಪ್ರಯತ್ನವೊಂದರಲ್ಲಿ ಕೆ. ಮಂಜು ಯಶಸ್ವಿಯಾಗಿದ್ದಾರೆ. 'ಚೆಲುವಿನ ಚಿತ್ತಾರ' ಎಂಬ ದಾಖಲೆ ಕಲೆಕ್ಷನ್ ಚಿತ್ರದ ಪ್ರಮುಖ ರೂವಾರಿಗಳಾದ ಎಸ್. ನಾರಾಯಣ್ ಮತ್ತು ಗಣೇಶ್ ಅವರನ್ನು ಮಂಜು ಮತ್ತೊಮ್ಮೆ ಒಂದುಗೂಡಿಸಿದ್ದಾರೆ.
ಕೆ. ಮಂಜು ಅವರು 'ಮೈನಾ' ಎಂಬ ತಮಿಳು ಚಿತ್ರದ ಕನ್ನಡ ರೀಮೇಕ್ ಹಕ್ಕನ್ನು ಖರೀದಿಸಿ ತಂದಿರುತ್ತಾರೆ. ಅಪ್ಪಟ ನೇಟಿವಿಟಿಯಿಂದ ಕೂಡಿದ ಇದು ನಿರ್ದೇಶಕನದೇ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಚಿತ್ರದುದ್ದಕ್ಕೂ ನಿರ್ದೇಶಕನೇ ವಿಜೃಂಭಿಸುತ್ತಾನೆ.
ಇಂಥಾ 'ಮೈನಾ' ಚಿತ್ರವನ್ನು ಕನ್ನಡ ನೇಟಿವಿಟಿಗೆ ಅಳವಡಿಸಿ ಸಮರ್ಥವಾಗಿ ನಿರ್ದೇಶಿಸಬಲ್ಲ ವ್ಯಕ್ತಿ ಯಾರು? ಈ ಪ್ರಶ್ನೆಗೆ ಎಸ್. ನಾರಾಯಣ್ ಎಂಬ ಏಕೈಕ ಉತ್ತರ ಬಂತಂತೆ.
ಮರುದಿನವೇ ಮಂಜು ಅವರು ನಾರಾಯಣ್ ಮನೆಗೆ ಭೇಡಿ ನೀಡಿದರು. 'ಮೈನಾ' ಕನ್ನಡ ಅವತರಿಣಿಕೆಗೆ ಬೇರೆ ಹೆಸರಿಡಲಾಗುತ್ತದೆ. ಈ ಚಿತ್ರವನ್ನು ನೀವೇ ನಿರ್ದೇಶಿಸಬೇಕು ಎಂದು ಪಟ್ಟು ಹಿಡಿದರು.
ನಾರಾಯಣ್ ಅವರ 'ದುಷ್ಟ' ಚಿತ್ರ ಜೂನ್ ಮೂರರಂದು ಬಿಡುಗಡೆಯಾಗುತ್ತಿದೆ. ಅದಕ್ಕೆ ಸಂಬಂಧಿತ ಸಿದ್ಧತೆಗಳಾಗಬೇಕು. ಜೊತೆಗೆ ಅಮಾನವೀಯ ಕೃತ್ಯಕ್ಕೆ ಗುರಿಯಾಗಿ ಎರಡೂ ಕಣ್ಣುಗಳನ್ನು ಕಳೆದುಕೊಂಡ ಜಿಮ್ ಮಾಸ್ಟರ್ ರಘು ಅವರ ದುರಂತ ಕಥೆ ಆಧಾರಿತ 'ನೆನಪಿದೆಯಾ ಓ ಗೆಳತಿ' ಚಿತ್ರದ ಚಿತ್ರೀಕರಣವನ್ನು ಜೂನ್ 19ರಿಂದ ಆರಂಭಿಸಬೇಕು. ಇಷ್ಟೆಲ್ಲಾ ಒತ್ತಡಗಳ ನಡುವೆ ನಾರಾಯಣ್ಗೆ ಬೇರೆ ಸಿನಿಮಾದ ಬಗ್ಗೆ ಯೋಚಿಸುವ ಸಮಯಾವಕಾಶವಾದರೂ ಎಲ್ಲಿ?
ಈ ವಸ್ಥುಸ್ಥಿತಿಯನ್ನು ಮಂಜು ಅವರಿಗೆ ಮನವರಿಕೆ ಮಾಡಲು ನಾರಾಯಣ್ಗೆ ಎರಡು ತಾಸು ಬೇಕಾಯ್ತಂತೆ. ಮಂಜು ಅರೆ ಮನಸ್ಸಿನಲ್ಲೇ ಹಿಂದಕ್ಕೆ ಹೊರಟರು.
ಮಾರನೆ ದಿನ ನಾರಾಯಣ್ ಮನೆಯಲ್ಲಿ ಮಂಜು ಮತ್ತು ಗಣೇಶ್ ಇಬ್ಬರೂ ಪ್ರತ್ಯಕ್ಷ! 'ಮೈನಾ' ಚಿತ್ರದ ಕಥೆ ಗಣೇಶ್ಗೆ ತುಂಬಾ ಇಷ್ಟವಾಯ್ತಂತೆ. ಜೊತೆಗೆ ಈ ಚಿತ್ರವನ್ನು ನಾರಾಯಣ್ ನಿರ್ದೇಶಿಸಬೇಕು ಎಂದು ಮಂಜು ಹೇಳಿದ್ದು ಇನ್ನಷ್ಟು ಇಷ್ಟವಾಯ್ತಂತೆ. ಈ ಇಷ್ಟಗಳಿಂದಾಗಿಯೇ ಗಣೇಶ್ ಅವರು ಖುದ್ದಾಗಿ ಮಂಜು ಅವರ ಜೊತೆಗೂಡಿ ನಿರ್ದೇಶಕರ ಮನೆಗೆ ಬಂದರು.
ಎರಡು ತಾಸು ಮಾತುಕತೆ ನಡೆಯಿತು. ಗಣೇಶ್ ನಾಯಕನಾಗಿರುವ ಚಿತ್ರ ನಿರ್ದೇಶಿಸಲು ನಾರಾಯಣ್ ಕೊನೆಗೂ ಒಪ್ಪಿದರು. ಇದು ಕೆ. ಮಂಜು ನಿರ್ಮಾಣದ 33ನೇ ಚಿತ್ರವಾಗಲಿದೆ.