ಕಂಪನಿಯು ಮುಂದಿನ ಆರು ತಿಂಗಳಲ್ಲಿ ಚೇತರಿಸಿಕೊಳ್ಳದಿದ್ದರೆ ಸತ್ಯಂ ಕಂಪ್ಯೂಟರ್ಸ್ ಲಿಮಿಟೆಟ್ನ 8,500 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗುವುದು ಎಂದು ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿನೀತ್ ನಯ್ಯರ್ ತಿಳಿಸಿದ್ದು, ಮತ್ತೆ ನೌಕರರಲ್ಲಿ ಅತಂತ್ರತೆ ಆವರಿಸಿದೆ.
"ಹಾಗೆ ಆಗುವುದಿಲ್ಲ ಎಂಬ ಬಗ್ಗೆ ನಮ್ಮಲ್ಲಿ ಭರವಸೆಯಿದೆ. ಎಲ್ಲವೂ ಸರಿಯಾಗಬಹುದು. ಆದರೆ ಅಂತಹ ಸಾಧ್ಯತೆಯೂ ಇದೆ" ಎಂದು ಕಂಪನಿಯ ಸ್ಥಿತಿಯ ಬಗ್ಗೆ ಸತ್ಯಂನ ಹೊಸ ಮಾಲಕ ಟೆಕ್ ಮಹೀಂದ್ರಾ ಲಿಮಿಟೆಡ್ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಯ್ಯರ್ ವಿಶ್ಲೇಷಣೆ ನಡೆಸುತ್ತಾ ವಿವರಿಸಿದ್ದಾರೆ.
ಈಗಿರುವ ಗ್ರಾಹಕರನ್ನು ಉಳಿಸಿಕೊಳ್ಳಲು ಸಹಕಾರಿಯೆನಿಸುವ ಮತ್ತು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸುವುದಕ್ಕೋಸ್ಕರ ಕಂಪನಿಯು ಹೊಸ ಮರುಸಂಘಟಿತ ಯೋಜನೆಯೊಂದನ್ನು ಜಾರಿಗೆ ತರಲಿದೆ ಎಂದೂ ಅವರು ತಿಳಿಸಿದ್ದಾರೆ.
ಸತ್ಯಂನ ಸ್ಥಾಪಕ ರಾಮಲಿಂಗರಾಜು ಅವರು ಕೋಟಿಗಟ್ಟಲೆ ಅವ್ಯವಹಾರ ನಡೆಸಿದ್ದು ಜನವರಿಯಲ್ಲಿ ಬಹಿರಂಗವಾದ ನಂತರ ಮಾರುಕಟ್ಟೆಯಲ್ಲಿ ಕಂಪನಿಯ ಸ್ಥಿತಿ ಡೋಲಾಯಮಾನವಾಗಿತ್ತು. ಅದನ್ನು ವೃದ್ಧಿಸುವತ್ತ ಹೊಸ ಮಾಲಕರು ಗಮನ ಕೇಂದ್ರೀಕರಿಸುತ್ತಿದ್ದಾರೆ.
ಟೆಕ್ ಮಹೀಂದ್ರಾವು ಸತ್ಯಂ ಕಂಪನಿಯನ್ನು ಸ್ವಾಧೀನಪಡಿಸುವ ಹೊತ್ತಿನಲ್ಲಿ 48,000 ಉದ್ಯೋಗಿಗಳಿದ್ದರು. ಕಂಪನಿಗೆ ಸಾಕಷ್ಟು ಆರ್ಡರ್ಗಳು ಬರುತ್ತಿಲ್ಲವಾದ ಕಾರಣ ಇದೀಗ 8,500 ಉದ್ಯೋಗಿಗಳನ್ನು ಹೆಚ್ಚುವರಿ ಎಂದು ಪರಿಗಣಿಸಲಾಗಿದೆ.
|