ಸತ್ಯಂ ಮಾಜಿ ಅಧ್ಯಕ್ಷ ಬಿ. ರಾಮಲಿಂಗ ರಾಜು ಅವರ ಕುಟುಂಬಸ್ಥರಿಂದ ನಡೆಸಲ್ಪಡುವ 'ಮೇತಾಸ್ ಇನ್ಫ್ರಾ'ಗೆ ನೀಡಲಾಗಿದ್ದ ಹೈದರಾಬಾದ್ ಮೆಟ್ರೋ ರೈಲು ಯೋಜನೆ ಒಪ್ಪಂದವನ್ನು ರದ್ದು ಮಾಡಲಾಗಿದೆ ಎಂದು ಆಂಧ್ರ ಪ್ರದೇಶ ಸರಕಾರ ಮಂಗಳವಾರ ತಿಳಿಸಿದೆ.
ಮಾರ್ಚ್ ಅಂತ್ಯದೊಳಗೆ ನಿಗದಿಪಡಿಸಿದ ಆರ್ಥಿಕ ಮುಕ್ತಾಯಕ್ಕೆ ಕಂಪನಿಯು ವಿಫಲವಾದ ಕಾರಣ ಒಪ್ಪಂದವನ್ನು ರಾಜ್ಯ ಸರಕಾರವು ರದ್ದು ಮಾಡಿದೆ ಎಂದು ನಗರಾಭಿವೃದ್ಧಿ ಸಚಿವ ಅನಮ್ ರಾಮನಾರಾಯಣ ರೆಡ್ಡಿ ಪ್ರಕಟಿಸಿದರು.
12,000 ಕೋಟಿ ರೂಪಾಯಿಗಳ ಯೋಜನೆಯನ್ನು ಗಿಟ್ಟಿಸಿಕೊಂಡಿದ್ದ ಮೇತಾಸ್ ಮುಂದಿನ 30 ವರ್ಷಗಳಲ್ಲಿ ಸರಕಾರಕ್ಕೆ 30,000 ಕೋಟಿ ರೂ.ಗಳನ್ನು ನೀಡುವ ಭರವಸೆ ನೀಡಿತ್ತು.
ಕಂಪನಿಯ ಅಧ್ಯಕ್ಷ ಕೆ. ರಾಮಲಿಂಗಂ ಇತ್ತೀಚೆಗಷ್ಟೇ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿಯವರನ್ನು ಭೇಟಿಯಾಗಿದ್ದರಾದರೂ ಆರ್ಥಿಕ ಗುರಿ ಅಥವಾ ನಿರ್ವಹಣೆ ಬಗ್ಗೆ ಯಾವುದೇ ಭರವಸೆ ನೀಡಿರಲಿಲ್ಲ.
ಮೇತಾಸ್ ನೀಡಿದ್ದ 71 ಕೋಟಿ ರೂಪಾಯಿಗಳನ್ನು ಹಿಂತಿರುಗಿಸಲಾಗುವುದಿಲ್ಲ ಎಂದಿರುವ ರೆಡ್ಡಿ, ಯೋಜನೆಯ ವಿವರಗಳನ್ನು ಜುಲೈ 13ರಂದು ಪ್ರಕಟಿಸಲಾಗುತ್ತದೆ ಎಂದಿದ್ದಾರೆ.
|