ಆರ್ಥಿಕ ಸಂಕಷ್ಟದಲ್ಲಿ ತೊಳಲಾಡುತ್ತಿರುವ ಏರ್ ಇಂಡಿಯಾವನ್ನು ಬಚಾವ್ ಮಾಡಲು ಸರಕಾರವು ಉದ್ಯಮಿ ರತನ್ ಟಾಟಾರವರ ಮೊರೆ ಹೋಗಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಲ್ಲಿನ ಅವ್ಯವಸ್ಥೆಗಳು, ಖರ್ಚು-ವೆಚ್ಚಗಳನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಟಾಟಾರನ್ನು ಸಲಹಾ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲು ಸರಕಾರ ಉತ್ಸುಕವಾಗಿದ್ದು, ಅದಕ್ಕಾಗಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ರವರು ಮಾಸಾಂತ್ಯದಲ್ಲಿ ಉದ್ಯಮಿಯನ್ನು ಭೇಟಿಯಾದ ನಂತರ ಅಧಿಕೃತ ಪ್ರಕಟಣೆ ಹೊರಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆ ಮೂಲಕ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಮೂಲ ವಾರಸುದಾರ ಮತ್ತೊಮ್ಮೆ ಏರ್ ಇಂಡಿಯಾ ವ್ಯವಹಾರಗಳಲ್ಲಿ ಭಾಗಿಯಾಗುವುದು ಖಚಿತವಾದಂತಾಗಿದೆ. ಏರ್ ಇಂಡಿಯಾ 77 ವರ್ಷಗಳ ಹಿಂದೆ ಟಾಟಾ ಸಮೂಹದಿಂದ ಪ್ರತಿಷ್ಠಾಪಿಸಲ್ಪಟ್ಟಿತ್ತು.
ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಏರ್ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡುವ ಸಲುವಾಗಿ ಅಂತಾರಾಷ್ಟ್ರೀಯ ಸಲಹಾ ಸಮಿತಿಯನ್ನು ರಚಿಸುವತ್ತ ಮುನ್ನಡಿಯಿಡುತ್ತಿದ್ದಾರೆ. ಈ ಸಮಿತಿಯಲ್ಲಿ ವಿಶ್ವದ ಪ್ರಮುಖ ವಿಮಾನಯಾನ ಸಂಸ್ಥೆಗಳ ಮಾಜಿ ಮುಖ್ಯಸ್ಥರನ್ನು ಸೇರಿಸಿಕೊಳ್ಳುವ ಮೂಲಕ ಪರಿಸ್ಥಿತಿಯನ್ನು ಬದಲಾಯಿಸುವ ಯೋಚನೆ ಪಟೇಲ್ರದ್ದು.
ಪ್ರಧಾನಿಯವರು ಟಾಟಾರಿಗೆ ಅಧಿಕೃತ ಆಹ್ವಾನ ನೀಡಿದ ನಂತರ ಈ ಸಂಬಂಧ ಪ್ರಕಟಣೆ ಹೊರಡಿಸಲಾಗುತ್ತದೆ. ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಕೂಡ ತತ್ವಗಳಿಗೆ ಬದ್ಧರಾಗಿದ್ದಾರೆ ಮತ್ತು ಸಿಂಗಾಪುರ ಏರ್ಲೈನ್ಸನ್ನು ಪಾರು ಮಾಡಿದವರು ಇಲ್ಲೂ ಯಶಸ್ವಿಯಾಗಲಿದ್ದಾರೆಂಬ ಭರವಸೆ ಕೇಂದ್ರ ಸರಕಾರಕ್ಕಿದೆ ಎಂದು ಮೂಲಗಳು ತಿಳಿಸಿವೆ.
1932ರಲ್ಲಿ ಟಾಟಾ ಏರ್ಲೈನ್ಸ್ನ್ನು ಜೆ.ಆರ್.ಡಿ. ಟಾಟಾ ಸ್ಥಾಪಿಸಿದ್ದರು. ಬಳಿಕ 1946ರಲ್ಲಿ ಹೆಸರು ಬದಲಿಸಿಕೊಂಡ ವಿಮಾನಯಾನ ಸಂಸ್ಥೆ 'ಏರ್ ಇಂಡಿಯಾ' ಎಂದು ನಾಮಕರಣಗೊಂಡು ಸರಕಾರದ ಪಾಲಾಗಿತ್ತು. 1980ರ ಅವಧಿಯಲ್ಲಿ ಏರ್ ಇಂಡಿಯಾದ ನಾನ್-ಎಕ್ಸಿಕ್ಯೂಟಿವ್ ಅಧ್ಯಕ್ಷರಾಗಿ ರತನ್ ಟಾಟಾ ಕಾರ್ಯ ನಿರ್ವಹಿಸಿದ್ದರು.
|