ಕೊಸರಾಡುತ್ತಿರುವ ಏರ್ ಇಂಡಿಯಾವನ್ನು ವಿಪತ್ತಿನಿಂದ ಪಾರು ಮಾಡಲು ಪಣ ತೊಟ್ಟಿರುವ ಸರಕಾರವು ರತನ್ ಟಾಟಾರತ್ತ ಒಲವು ತೋರಿಸಿದ ಬೆನ್ನಿಗೆ ಇನ್ಫೋಸಿಸ್ನ ನಾರಾಯಣ ಮೂರ್ತಿ ಮತ್ತು ಟಿಸಿಎಸ್ನ ಎಸ್. ರಾಮದೊರೈಯವರನ್ನು ಅಂತಾರಾಷ್ಟ್ರೀಯ ಸಲಹಾ ಸಮಿತಿಗೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ನಷ್ಟದಲ್ಲಿರುವ ಏರ್ ಇಂಡಿಯಾ ನೆರವಿಗೆ ಬಂದಿರುವ ಸರಕಾರವು ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಲ್ಲಿನ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದಲ್ಲದೆ, ಹೊಸ ರೂಪುರೇಷೆಗಳ ಪೂರ್ವ ಸಿದ್ಧತೆಯಲ್ಲಿದೆ. ಇದೇ ನಿಟ್ಟಿನಲ್ಲಿ ಜಾಗತಿಕ ವಿಮಾನಯಾನ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಮಾಜಿ ಅಗ್ರ ಅಧಿಕಾರಿಗಳನ್ನು ಸೆಳೆಯುವ ಮೂಲಕ ಏರ್ ಇಂಡಿಯಾವನ್ನು ಮರಳಿ ಹಳಿಗೆ ತರಬಹುದು ಎನ್ನುವುದು ಲೆಕ್ಕಾಚಾರ.
ಉದ್ಯಮಿ ರತನ್ ಟಾಟಾರನ್ನೊಳಗೊಂಡ ಏಳು ಮಂದಿ ಸದಸ್ಯರ ಸಲಹಾ ಸಮಿತಿಯಲ್ಲಿ ಲುಫ್ತಾನ್ಸಾ ಮತ್ತು ಸಿಂಗಾಪುರ ಏರ್ಲೈನ್ಸ್ನ ಮಾಜಿ ಮುಖ್ಯಸ್ಥರು ಇರಲಿದ್ದಾರೆ ಎಂದು ಬಲ್ಲ ಮೂಲವೊಂದು ತಿಳಿಸಿದೆ.
ಜಾಗತಿಕ ಸಲಹಾ ಸಮಿತಿಗೆ ಯಾರೆಲ್ಲಾ ಸೇರಬೇಕೆಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಮುಖ್ಯ ನಿರ್ವಹಣಾಧಿಕಾರಿ ಹುದ್ದೆಗಾಗಿ ಜಾಗತಿಕ ಜಾಹೀರಾತನ್ನೂ ಹೊರಡಿಸಲಾಗುತ್ತದೆ. ಅವರು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಅರವಿಂದ್ ಜಾದವ್ರ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.
ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ, ಇನ್ಫೋಸಿಸ್ ಮಾರ್ಗದರ್ಶಕ ಹಾಗೂ ಅಧ್ಯಕ್ಷ ಎನ್.ಆರ್. ನಾರಾಯಣ ಮೂರ್ತಿ ಮತ್ತು ಟಿಸಿಎಸ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್. ರಾಮದೊರೈಯವರ ಹೆಸರುಗಳೂ ವಿಮಾನಯಾನ ಸಂಸ್ಥೆಯ ಸ್ವತಂತ್ರ ನಿರ್ದೇಶಕರ ಹುದ್ದೆಗಳಿಗಾಗಿ ಕೇಳಿ ಬರುತ್ತಿವೆ.
|