ಸತ್ಯಂ ಸ್ಥಾಪಕ ಬಿ. ರಾಮಲಿಂಗ ರಾಜು, ಅವರ ಸಹೋದರ ರಾಮ ರಾಜು ಮತ್ತು ಸತ್ಯಂ ಮಾಜಿ ಹಣಕಾಸು ಅಧಿಕಾರಿ ವದ್ಲಮಣಿ ಶ್ರೀನಿವಾಸ್ರಿಗೆ ಸುಳ್ಳು ಪತ್ತೆ ಮತ್ತು ಮಂಪರು ಪರೀಕ್ಷೆ ನಡೆಸಲು ಸಿಬಿಐಗೆ ವಿಶೇಷ ನ್ಯಾಯಾಲಯವು ಅನುಮತಿ ನೀಡಿದೆ.
ಹೈದರಾಬಾದ್ ನ್ಯಾಯಾಲಯವು ಬಹುಕೋಟಿ ಸತ್ಯಂ ಹಗರಣದ ರೂವಾರಿಗಳಾದ ರಾಮಲಿಂಗ ರಾಜು ಮತ್ತು ಇತರ ಆರೋಪಿಗಳ ನ್ಯಾಯಾಂಗ ಬಂಧನವನ್ನು ಜುಲೈ 22ರವರೆಗೆ ಬುಧವಾರ ವಿಸ್ತರಿಸಿದೆ.
ಸತ್ಯಂ ಕಂಪ್ಯೂಟರ್ಸ್ನ 7,136 ಕೋಟಿ ರೂಪಾಯಿಗಳ ಭ್ರಷ್ಟಾಚಾರವನ್ನು 2009ರ ಜನವರಿ 7ರಂದು ಒಪ್ಪಿಕೊಂಡಿದ್ದ ರಾಮಲಿಂಗ ರಾಜು ಮತ್ತು ಇತರರಿಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಬೇಕೆಂಬ ಕೋರಿಕೆಯನ್ನು ಸಿಬಿಐ ಮಾರ್ಚ್ 24ರಂದು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದೀಗ ಅನುಮತಿ ನೀಡಿರುವ ಸಿಬಿಐ ನ್ಯಾಯಾಲಯ, ಎಂಟು ವಾರಗಳೊಳಗೆ ಪರೀಕ್ಷೆಗಳನ್ನು ಮುಗಿಸಬೇಕು ಎಂದು ಗಡುವು ವಿಧಿಸಿದೆ.
"ಈ ಸುಳ್ಳು ಪತ್ತೆ ಮತ್ತು ಮಂಪರು ಪರೀಕ್ಷೆಗಳನ್ನು ಕಾನೂನು ಪ್ರಕಾರ ಸಾಕ್ಷಿ ಎಂದು ನ್ಯಾಯಾಲಯವು ಪರಿಗಣಿಸುವುದಿಲ್ಲ. ಆದರೆ ನಮಗೆ ತನಿಖೆಗೆ ಅನುಕೂಲವಾಗುವ ದೃಷ್ಟಿಯಿಂದ ಇದು ಉಪಯುಕ್ತ. ವ್ಯಕ್ತಿಯ ಇತರ ನಡವಳಿಕೆಗಳನ್ನು ಕೂಡ ಇದರಿಂದ ತಿಳಿದುಕೊಳ್ಳಬಹುದಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ರಾಮಲಿಂಗ ರಾಜು ತನಿಖಾ ಸಂಸ್ಥೆ ವಿಚಾರಣೆ ನಡೆಸುವಾಗ ಎಲ್ಲಾ ವಿಷಯಗಳನ್ನು ಬಹಿರಂಗಪಡಿಸಲು ಒಪ್ಪುತ್ತಿಲ್ಲ. ಇಲ್ಲಿ ಹೆಚ್ಚಿನ ಸಾಕ್ಷ್ಯಾಧಾರಗಳ ಅಗತ್ಯವಿದೆ. ಅದಕ್ಕಾಗಿ ವಿಧಿ ವಿಜ್ಞಾನ ಪರೀಕ್ಷೆಗೆ ಅವಕಾಶ ನೀಡಬೇಕು ಎಂದು ಸಿಬಿಐ ಮನವಿ ಸಲ್ಲಿಸಿತ್ತು.
|