ದೇಶದ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಾಲು ಮತ್ತು ತರಕಾರಿಗಳ ಸರಬರಾಜಿನಲ್ಲಿ ಅಡ್ಡಿಯಾಗಿದ್ದರಿಂದ ದರದಲ್ಲಿ ಏರಿಕೆಯಾಗಿದ್ದರಿಂದ,ಆಹಾರ ಹಣದುಬ್ಬರ ದರ ಸೆಪ್ಟೆಂಬರ್ ವಾರಂತ್ಯಕ್ಕೆ 15.46ಕ್ಕೆ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ವಾರದ ಆಧಾರದನ್ವಯ ಆಹಾರ ಹಣದುಬ್ಬರ ದರ ಕಳೆದ ವಾರಕ್ಕೆ ಹೋಲಿಸಿದಲ್ಲಿ ಶೇ.15.10ದಿಂದ ಶೇ.0.36ರಷ್ಟು ಏರಿಕೆಯಾಗಿದೆ.
ಸತತ ನಾಲ್ಕನೇ ವಾರದ ಅವಧಿಗೆ ಆಹಾರ ಹಣದುಬ್ಬರ ದರ ಏರಿಕೆ ಕಂಡಿದೆ.ಜುಲೈ ತಿಂಗಳ ಅವಧಿಯಲ್ಲಿ ಇಳಿಕೆಯ ಸೂಚನೆಗಳನ್ನು ನೀಡಿದ್ದ ಆಹಾರ ಹಣದುಬ್ಬರ ದರ ಅಗಸ್ಟ್ ಮೊದಲ ವಾರದಿಂದ ನಿರಂತರ ಏರಿಕೆ ಕಾಣುತ್ತಿದೆ.
ದೇಶದ ಹಲವು ಭಾಗಗಳಾದ ದೆಹಲಿ, ಹರಿಯಾಣಾ, ಪಂಜಾಬ್, ಉತ್ತರಪ್ರದೇಶ, ಹಿಮಾಚಲ ಪ್ರದೇಶ, ಆಸ್ಸಾಂ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಆಹಾರ ವಸ್ತುಗಳ ಸರಬರಾಜಿನಲ್ಲಿ ತೊಂದರೆಯಾಗಿದೆ.
ವಾರ್ಷಿಕ ಆಧಾರದನ್ವಯ, ಭತ್ತ ಮತ್ತು ಗೋಧಿ ದರಗಳಲ್ಲಿ ಏರಿಕೆಯಾಗಿದ್ದರಿಂದ ಧಾನ್ಯಗಳ ದರಗಳಲ್ಲಿ ಶೇ.6.75ರಷ್ಟು ಏರಿಕೆಯಾಗಿದೆ.
ಏತನ್ಮಧ್ಯೆ, ದ್ವಿದಳ ಧಾನ್ಯಗಳ ದರಗಳಲ್ಲಿ ಶೇ.4.01ರಷ್ಟು ಏರಿಕೆಯಾಗಿದ್ದು, ಭತ್ತ ಮತ್ತು ಗೋಧಿ ದರದಲ್ಲಿ ಶೇ.ಕ್ರಮವಾಗಿ ಶೇ.9.21 ಮತ್ತು ಶೇ.5.52ರಷ್ಟು ದುಬಾರಿಯಾಗಿವೆ.
ಇತರ ಆಹಾರ ವಸ್ತುಗಳಾದ, ಹಾಲು ದರದಲ್ಲಿ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದಲ್ಲಿ ಶೇ.23.41ರಷ್ಟು ಏರಿಕೆ ಕಂಡಿದೆ. ಹಣ್ಣುಗಳ ದರಗಳಲ್ಲಿ ಶೇ.10.33ರಷ್ಟು ಏರಿಕೆ ಕಂಡಿವೆ.