ದೇಶದ ಖಾಸಗಿ ವಿಮಾನಯಾನ ಸಂಸ್ಥೆಗಳು ಪ್ರಯಾಣ ದರವನ್ನು ಮನಬಂದಂತೆ ಏರಿಕೆ ಘೋಷಿಸಲು ಬೇಡಿಕೆ ಸಲ್ಲಿಸಿರುವುದಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕಿಂತ ಮೊದಲು ವಿಮಾನಯಾನ ಸಂಸ್ಥೆಗಳು ಕಡಿಮೆ ದರ ನಿಗದಿಪಡಿಸಿದ್ದರಿಂದ, ವಿಮಾನಯಾನ ಕ್ಷೇತ್ರ ಚೇತರಿಸಿಕೊಂಡಿದೆ ಎನ್ನುವುದನ್ನು ಮರೆಯಬಾರದು ಎಂದು ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಿದ್ದಾರೆ.
ಕಡಿಮೆ ದರ ನಿಗದಿಪಡಿಸಿದ್ದರಿಂದ ಕಳೆದ ಐದು ವರ್ಷಗಳ ಅವಧಿಯಲ್ಲಿ ವಿಮಾನಯಾನ ಕ್ಷೇತ್ರ ಚೇತರಿಸಿಕೊಂಡಿದೆ ಎನ್ನುವುದು ವಾಸ್ತವ ಸಂಗತಿಯಾಗಿದೆ. ಪ್ರಯಾಣಿಕರು ಕಡಿಮೆ ದರದ ಲಾಭವನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಇದೀಗ ವಿಮಾನಯಾನ ಸಂಸ್ಥೆಗಳು, ನಾಲ್ಕು ಪಟ್ಟು ದರ ಹೆಚ್ಚಳಗೊಳಿಸುವ ಪ್ರಯತ್ನದಲ್ಲಿದ್ದು, ಮನಬಂದಂತೆ ದರ ಏರಿಕೆ ಮಾಡಿದಲ್ಲಿ ಕೇಂದ್ರ ಸರಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಎಚ್ಚರಿಸಿದರು.
ವಿಮಾನಯಾನ ಸಂಸ್ಥೆಗಳು ಪ್ರಯಾಣ ದರವನ್ನು ಮುಕ್ತ ಹಾಗೂ ಪಾರದರ್ಶಕವಾಗಿಸಬೇಕು. ಅಂತಿಮ ಕ್ಷಣದಲ್ಲಿ ಟಿಕೆಟ್ ದರಗಳನ್ನು ಹೆಚ್ಚಿಸುವ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಗುಡುಗಿದ್ದಾರೆ.