ದರ ಏರಿಕೆಯ ಕಳವಳಕಾರಿ ಸ್ಥಿತಿ ಮುಂದುವರಿದಿದ್ದು, ಹಣದುಬ್ಬರ ದರವನ್ನು ಶೇ.4-5ಕ್ಕೆ ಇಳಿಕೆಯಾಗಿಸಿಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥ ಸಿ.ರಂಗರಾಜನ್ ಹೇಳಿದ್ದಾರೆ.
ಹಣದುಬ್ಬರ ಒತ್ತಡ ನಿಯಂತ್ರಣಕ್ಕಾಗಿ ಮೇಲ್ವಿಚಾರಕ ಹಾಗೂ ಆರ್ಥಿಕ ನೀತಿಗಳಲ್ಲಿ ಕೆಲ ಬದಲಾವಣೆಗಳನ್ನು ತರಲು ಸರಕಾರ ಚಿಂತನೆ ನಡೆಸಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಫೈನಾನ್ಸ್ ಆಯೋಜಿಸಿದ ಸಭೆಯಲ್ಲಿ ತಿಳಿಸಿದ್ದಾರೆ.
ವಿಶೇಷವಾಗಿ ಹಣದುಬ್ಬರವನ್ನು ನಿಯಂತ್ರಿಸಲು ಆರ್ಥಿಕ ನೀತಿಗಳನ್ನು ರೂಪಿಸಲಾಗುವುದು.ಹಣದುಬ್ಬರ ದರವನ್ನು ಶೇ.4-5ಕ್ಕೆ ಇಳಿಕೆಗೊಳಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಆರ್ಬಿಐನಿಂದ ರೆಪೋ ದರ ಏರಿಕೆ ಮತ್ತು ಆಹಾರ ಧಾನ್ಯ ಮಾರುಕಟ್ಟೆಗಳಲ್ಲಿ ಸರಕಾರ ಮಧ್ಯಪ್ರವೇಶಿಸಿ, ದರ ನಿಯಂತ್ರಿಸಲು ಸರಕಾರ ಬದ್ಧವಾಗಿದೆ ಎಂದು ವಿವರಣೆ ನೀಡಿದ್ದಾರೆ.
ಆದಾಗ್ಯೂ, ಆಹಾರ ಹಣದುಬ್ಬರ ದರ ಫೆಬ್ರವರಿ ಎರಡನೇ ವಾರಕ್ಕೆ ಅಂತ್ಯಗೊಂಡಂತೆ ಶೇ.11.49ಕ್ಕೆ ಏರಿಕೆಯಾಗಿರುವುದು ಸರಕಾರಕ್ಕೆ ಕಳವಳ ಮೂಡಿಸಿದೆ. ಹಣದುಬ್ಬರ ದರ ಶೇ.8ಕ್ಕೆ ತಲುಪಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥ ಸಿ.ರಂಗರಾಜನ್ ತಿಳಿಸಿದ್ದಾರೆ.