ಎಲ್ಟಿಟಿಇ ನಾಯಕ ವೇಲುಪಿಳ್ಲೈ ಪ್ರಭಾಕರನ್ ಶ್ರೀಲಂಕಾ ಸೇನೆಯ ಗುಂಡಿನ ದಾಳಿಗೆ ಬಲಿಯಾಗಿದ್ದಾನೆಂಬ ವರದಿಗಳನ್ನು ನಿರಾಕರಿಸಿರುವ ಎಲ್ಟಿಟಿಇ ಬೇಹುಗಾರಿಕೆ ದಳದ ಅಂತಾರಾಷ್ಟ್ರೀಯ ಕಾರ್ಯಾಲಯ ಮುಖ್ಯಸ್ಥ ಅರಿವೆಳಗನ್, ಆತನ ಸಾವಿನ ವರದಿಯು ಜನರ ದಾರಿ ತಪ್ಪಿಸಲು ಶ್ರೀಲಂಕಾ ಸರಕಾರ ಮತ್ತು ಸೇನೆಯ ಹುನ್ನಾರವಾಗಿತ್ತು ಎಂದು ಹೇಳಿದ್ದಾನೆ.
ನಮ್ಮ ಪ್ರೀತಿಪಾತ್ರ ನಾಯಕ ಇನ್ನೂ ಜೀವಂತವಿದ್ದಾನೆಂದು ಎಲ್ಟಿಟಿಇ ಪರವಾಗಿರುವ ತಮಿಳ್ನೆಟ್ ವೆಬ್ಸೈಟಿಗೆ ಬಹಿರಂಗಪಡಿಸಿದ ಅವರು, ಭವಿಷ್ಯದಲ್ಲಿ ಸೂಕ್ತ ಸಮಯದಲ್ಲಿ ತಮಿಳು ಜನರನ್ನು ಎಲ್ಟಿಟಿಇ ನಾಯಕತ್ವ ಸಂಪರ್ಕ ಸಾಧಿಸುತ್ತದೆಂದು ನುಡಿದಿದ್ದಾರೆ. ತಮಿಳು ಈಳಂ ಹೋರಾಟಕ್ಕೆ ಬೆಂಬಲದ ಧ್ವನಿ ನೀಡಿದ್ದ ತಮಿಳು ಸಮುದಾಯವನ್ನು ಗೊಂದಲದಲ್ಲಿ ಮುಳುಗಿಸಲು ಈ ವದಂತಿಗಳನ್ನು ಹುಟ್ಟುಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.
ಶ್ರೀಲಂಕಾದಲ್ಲಿ ಹಿರಿಯ ವರದಿಗಾರನ ಮೂಲಕ ತಮ್ಮ ಗುರುತನ್ನು ದೃಢೀಕರಿಸಿದ ಅರಿವಳಗನ್, ಭದ್ರತಾ ಕಾರಣಗಳಿಗಾಗಿ ತಾವು ಇರುವ ಸ್ಥಳವನ್ನು ಬಹಿರಂಗ ಮಾಡಿಲ್ಲ. |