ಎಲ್ಟಿಟಿಇ ಮಹಿಳಾ ಪಡೆಯ ರಾಜಕೀಯ ವಿಭಾಗದ ನಾಯಕಿಯನ್ನು ನಿರಾಶ್ರಿತ ಶಿಬಿರದಿಂದ ಬಂಧಿಸಿದ ಘಟನೆ ನಡೆದಿದೆ. ಉತ್ತರ ಶ್ರೀಲಂಕಾದ ಗುಂಡು ಹಾರಾಟ ನಿಷೇಧ ಪ್ರದೇಶದಿಂದ ಸರ್ಕಾರಿ ನಿಯಂತ್ರಿತ ಪ್ರದೇಶಗಳಿಗೆ ಈ ಮಹಿಳೆ ದಾಟಿದ್ದಳು.
ಮಿಲಿಟರಿ ಕಾರ್ಯಾಚರಣೆಯ ಕೊನೆಯ ಹಂತದಲ್ಲಿ ಮುಲ್ಲೈತಿವುನಿಂದ ಇತರೆ ನಾಗರಿಕರ ಜತೆ ಸಂತ್ರಸ್ತರ ಶಿಬಿರಕ್ಕೆ ಆಗಮಿಸಿದ ಸುಬ್ರಮಣಿಯಂ ಶಿವತಾಯಿ ಅಲಿಯಾಸ್ ತಮಿಳಿನಿಯನ್ನು ವಾಯುನಿಯದ ಗ್ರಾಮವೊಂದರಲ್ಲಿ ಬಂಧಿಸಲಾಯಿತು ಎಂದು ಮಾಧ್ಯಮದ ವರದಿ ತಿಳಿಸಿದೆ.ಇತರೆ ನಾಗರಿಕರ ಜತೆ ಎಲ್ಟಿಟಿಇ ಹಿಡಿತದ ಪ್ರದೇಶವನ್ನು ಬಿಡುವಾಗ ತಮಿಳಿನಿ ತನ್ನ ಸಯಾನೈಡ್ ಗುಳಿಗೆ ಮತ್ತು ಬಂದೂಕನ್ನು ಎಸೆದಿದ್ದಳೆಂದು ವರದಿಯಾಗಿದೆ.
ಪುತುಮತಾಲನ್ನಿಂದ ತಲೆತಪ್ಪಿಸಿಕೊಂಡು ಸರ್ಕಾರಿ ನಿಯಂತ್ರಿತ ಪ್ರದೇಶಕ್ಕೆ ತಮಿಳಿನಿ ಆಗಮಿಸಿದ್ದು, ಪೊಲೀಸರ ವಿಶೇಷ ತಂಡ ಬಂಧಿಸಿದಾಗ ಆಕೆಯ ತಾಯಿ ಮತ್ತು ಸೋದರಿ ಸಹ ಜತೆಯಲ್ಲಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾನು ಸಯನೈಡ್ ಗುಳಿಗೆ ಮತು ಪಿಸ್ತೂಲನ್ನು ಎಸೆದು ಸಂತ್ರಸ್ತ ಮಹಿಳೆಯ ಸೋಗಿನಲ್ಲಿ ಬಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಎಲ್ಟಿಟಿಇಯನ್ನು 1991ರಲ್ಲಿ ಸೇರಿದ ಆಕೆ ಶ್ರೀಲಂಕಾ ಸೇನೆಯ ಜತೆ ಸಂಘರ್ಷದಲ್ಲಿ ನಾಯಕಿ ನೆಸ್ಮಿಯಾ ಮೃತಪಟ್ಟ ಬಳಿಕ ಸಂಘಟನೆಯ ರಾಜಕೀಯ ಮುಖ್ಯಸ್ಥೆಯ ಸ್ಥಾನಕ್ಕೆ ಏರಿದರು. |