ಪಾಕಿಸ್ತಾನದ ಕೋರ್ಟ್ ಮಂಗಳವಾರ ಜಮಾತ್-ಉದ್-ದವಾ ಮುಖಂಡ ಹಫೀಜ್ ಮಹಮದ್ ಸಯೀದ್ ಜತೆ ಅವನ ನಿಕಟವರ್ತಿ ಕರ್ನಲ್(ನಿವೃತ್ತ) ನಾಜಿರ್ ಅಹ್ಮದ್ನನ್ನು ಕೂಡ ಬಿಡುಗಡೆ ಮಾಡಿದೆ. ಲಾಹೋರ್ ಹೈಕೋರ್ಟ್ ಮೂವರು ಸದಸ್ಯರ ಪೀಠವು ಸಯೀದ್ ಮತ್ತು ಅಹ್ಮದ್ ಬಿಡುಗಡೆಗೆ ಆದೇಶ ನೀಡಿತು.
ಇವರಿಬ್ಬರ ಬಂಧನವು ಪಾಕಿಸ್ತಾನದ ಸಂವಿಧಾನ ಮತ್ತು ಕಾನೂನಿನ ಉಲ್ಲಂಘನೆಯಾಗಿದೆಯೆಂದು ಜೆಯುಡಿ ಮುಖಂಡನ ಪರ ವಕೀಲ ಎ.ಕೆ. ದೊಗಾರ್ ವಾದಗಳನ್ನು ಆಲಿಸಿದ ಬಳಿಕ ನ್ಯಾಯಪೀಠವು ಸಯೀದ್ ಮತ್ತು ಅಹ್ಮದ್ ಬಿಡುಗಡೆಗೆ ಆದೇಶ ನೀಡಿತು.
ಸುಮಾರು 45 ನಿಮಿಷಗಳ ಕಾಲ ಪೀಠವನ್ನು ಉದ್ದೇಶಿಸಿ ದೊಗಾರ್ ಮಾತನಾಡಿ, ಜೆಯುಡಿ ಆಸ್ತಿಪಾಸ್ತಿ ವಹಿವಾಟು ಸ್ಥಗಿತಗೊಳಿಸಬೇಕು ಮತ್ತು ಅದರ ನಾಯಕರಿಗೆ ಪ್ರಯಾಣ ನಿಷೇಧ ವಿಧಿಸಬೇಕೆಂದು ಮಾತ್ರ ವಿಶ್ವಸಂಸ್ಥೆ ಭದ್ರತಾಮಂಡಳಿ ಮನವಿ ಮಾಡಿತ್ತೆಂದು ಹಾಗೂ ಜೆಯುಡಿ ನಾಯಕರ ಬಂಧನಕ್ಕೆ ಒತ್ತಾಯಿಸಿರಲಿಲ್ಲವೆಂದೂ ವಾದ ಮಂಡಿಸಿದರು.
ವಿಶ್ವಸಂಸ್ಥೆ ಭದ್ರತಾಮಂಡಳಿ ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವ ಬದ್ಧತೆ ಪಾಕಿಸ್ತಾನ ಕಾನೂನುಗಳಡಿಯಿಲ್ಲ ಎಂದು ಅವರು ವಾದಿಸಿದರು. ಹೈಕೋರ್ಟ್ ತೀರ್ಪನ್ನು ಶ್ಲಾಘಿಸಿರುವ ಜೆಯುಡಿ ವಕ್ತಾರ, ಹಫೀಜ್ ಸಯೀದ್ ಭಯೋತ್ಪಾದಕನಲ್ಲ ಮತ್ತು ಜೆಯುಡಿ ಭಯೋತ್ಪಾದಕ ಸಂಘಟನೆಯಲ್ಲವೆಂದು ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಒತ್ತಡವನ್ನು ಕೋರ್ಟ್ ಖಂಡಿಸುವ ಮೂಲಕ ಪಾಕಿಸ್ತಾನದ ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ರುಜುವಾತು ಮಾಡಿದ್ದಾರೆಂದು ತಿಳಿಸಿದ್ದಾರೆ.
ನವೆಂಬರ್ 26ರಂದು 160 ಜನರನ್ನು ಬಲಿತೆಗೆದುಕೊಂಡ ಮುಂಬೈ ಭಯೋತ್ಪಾದನೆ ದಾಳಿಯಲ್ಲಿ ಲಷ್ಕರೆ ತಯ್ಯಬಾದ ಅಂಗವಾದ ಜಮಾತ್ ಉದ್ ದವಾ ಕೈವಾಡವಿದೆಯೆಂದು ಭಾರತ ಆರೋಪಿಸಿದ ಬಳಿಕ ಜಮಾತ್ ಸಂಘಟನೆಗೆ ಭದ್ರತಾ ಮಂಡಳಿ ನಿಷೇಧ ಹೇರಿತ್ತು. ಸಯೀದ್ನನ್ನು ಕಳೆದ ಡಿಸೆಂಬರ್ 11ರಂದು ಗೃಹಬಂಧನದಲ್ಲಿ ಇರಿಸಲಾಗಿತ್ತು. |