ಮುಂಬೈ ಭಯೋತ್ಪಾದನೆ ದಾಳಿಯ ಸೂತ್ರಧಾರ ಹಫೀಜ್ ಮೊಹಮದ್ ಸಯೀದ್ನ ಬಿಡುಗಡೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರಾಕರಿಸಿದ್ದ ಪಾಕಿಸ್ತಾನ ಗುರುವಾರ ತಿರುವು ಮುರುವಾಗಿದ್ದು ಅವನ ಬಿಡುಗಡೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ. ಕಳೆದ ಡಿಸೆಂಬರ್ನಿಂದ ಲಾಹೋರ್ನಲ್ಲಿ ಗೃಹಬಂಧನದಲ್ಲಿರುವ ಸಯೀದ್ ಬಿಡುಗಡೆಗೆ ಪಾಕಿಸ್ತಾನ ಕೋರ್ಟ್ ಆದೇಶ ನೀಡಿದೆ.
ಸಯೀದ್ ಬಿಡುಗಡೆಗೆ ಭಾರತ ನಿರಾಶೆ ವ್ಯಕ್ತಪಡಿಸಿದ್ದರೂ, ಭಯೋತ್ಪಾದನೆ ದಾಳಿಗಳ ತನಿಖೆಯಲ್ಲಿ ಹಿನ್ನಡೆಯಾಗುವುದಿಲ್ಲವೆಂದು ಸ್ಪಷ್ಟಪಡಿಸಿತ್ತು,.ಪಾಕಿಸ್ತಾನದ ಮೇಲೆ ಒತ್ತಡ ಹೇರಲು ಸಹಾಯ ಕೋರಿ ಅಮೆರಿಕವನ್ನು ಕೂಡ ಭಾರತ ಸಂಪರ್ಕಿಸಿದೆ.
ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಕ್ಕೆ ವಿಶೇಷ ಪ್ರತಿನಿಧಿ ರಿಚರ್ಡ್ ಹಾಲ್ಬ್ರೂಕ್, ಸಯೀದ್ ಬಿಡುಗಡೆಯು ಕಳವಳಕಾರಿ ಎಂದು ತಿಳಿಸಿದೆ. ಭಾರತ ಪಾಕಿಸ್ತಾನಕ್ಕೆ ನೀಡಿದ ಸಾಕ್ಷ್ಯಾಧಾರದ ಕೊರತೆಯಿಂದ ಸಯೀದ್ ಬಿಡುಗಡೆ ಮಾಡಲಾಯಿತೆಂದು ಪಾಕಿಸ್ತಾನ ಸಮಜಾಯಿಷಿ ನೀಡಿತ್ತು.
ಆದಾಗ್ಯೂ, ಗುರುವಾರ ಸಿಎನ್ಎನ್-ಐಬಿಎನ್ ಜತೆ ಮಾತನಾಡಿದ ಪಾಕಿಸ್ತಾನ ಅಟಾರ್ನಿ ಜನರಲ್ ಲತೀಫ್ ಖೋಸಾ ಸಯೀದ್ನ ಮರುಬಂಧನಕ್ಕೆ ಪಾಕಿಸ್ತಾನಕ್ಕೆ ಈಗ ಸಾಕಷ್ಟು ಸಾಕ್ಷ್ಯಾಧಾರವಿದೆ ಎಂದು ದೃಢಪಡಿಸಿದ್ದಾರೆ. ನಾವು ಹಫೀಜ್ ಸಯೀದ್ ವಿರುದ್ಧ ಶುಕ್ರವಾರ ಪಾಕಿಸ್ತಾನ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಖೋಸಾ ತಿಳಿಸಿದ್ದಾರೆ. |