ದ್ವೀಪರಾಷ್ಟ್ರವಾದ ಶ್ರೀಲಂಕಾದಲ್ಲಿ ಲಿಬರೇಷನ್ ಟೈಗರ್ಸ್ ಆಫ್ ತಮಿಳು ಈಳಂ ವಿರುದ್ಧ ಲಂಕಾ ಸೇನೆ ಕೈಗೊಂಡ ಕಾರ್ಯಾಚರಣೆ ಕುರಿತಂತೆ ಭಾರತದ ನಿಲುವಿನ ಬಗ್ಗೆ ಅಸಂತುಷ್ಟಿಗೊಂಡಿರುವುದಾಗಿ ಶ್ರೀಲಂಕಾದಲ್ಲಿನ ತಮಿಳರು ತಿಳಿಸಿದ್ದಾರೆ.
ಸೋಮವಾರ ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಕೌನ್ಸಿಲ್ ಅಫೆರ್ಸ್ (ಐಸಿಡಬ್ಲ್ಯುಎ) ನೇತೃತ್ವದಲ್ಲಿ ನಡೆದ ಮಾತುಕತೆ ಸಂದರ್ಭದಲ್ಲಿ ತಮಿಳು ಮೂಲದ ಶ್ರೀಲಂಕಾದ ಪತ್ರಕರ್ತರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಎಲ್ಟಿಟಿಇ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾರತ ಸರ್ಕಾರ ಪೂರ್ಣ ಸಹಕಾರ ನೀಡಿದೆ ಎಂಬ ಭಾವನೆ ಶ್ರೀಲಂಕಾದಲ್ಲಿರುವ ತಮಿಳರಲ್ಲಿ ಮನೆಮಾಡಿದೆ ಎಂದು ವಿವರಿಸಿದ್ದಾರೆ.
ಈ ಘಟನೆಯಲ್ಲಿ ಭಾರತ ಸೇರಿದಂತೆ ಪ್ರತಿಯೊಬ್ಬರು ನಮ್ಮನ್ನು ತೇಜೋವಧೆ ಮಾಡಿದರು ಎಂಬ ಭಾವ ತಮಿಳರಲ್ಲಿ ತುಂಬಿಕೊಂಡಿದೆ. ಶ್ರೀಲಂಕಾ ಮಿಲಿಟರಿ ಅಂತಿಮವಾಗಿ ನಡೆಸುತ್ತಿದ್ದ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಾದರೂ ಭಾರತ ನೆರವಿಗೆ ಧಾವಿಸಬಹುದು ಎಂಬ ನಿರೀಕ್ಷೆ ಲಂಕಾದ ತಮಿಳರಲ್ಲಿ ಇತ್ತು ಎಂದು ಶ್ರೀಲಂಕಾದ ಉದಯನ್ ಮತ್ತು ಸೋದೋರೊಳಿ ಪತ್ರಿಕೆ ಸಂಪಾದಕ ಆರ್.ಭಾರ್ತಿ ಹೇಳಿದರು.
ಶ್ರೀಲಂಕಾ ಸರ್ಕಾರ ಉತ್ತರ ಭಾಗದಲ್ಲಿರುವ ತಮಿಳು ಕುಟುಂಬಗಳಿಗೆ ಮಾತ್ರ ಪುನರ್ ವಸತಿ ಮಾಡುತ್ತಿದೆ. ಆದರೂ ಸರ್ಕಾರದ ಕಾರ್ಯದಲ್ಲಿ ಪೂರ್ಣ ಸ್ಪಷ್ಟತೆ ಇಲ್ಲ ಎಂದು ಮತ್ತೊಂದು ಪತ್ರಕರ್ತರು ದೂರಿದರು. ಆದರೂ ರಾಜಪಕ್ಸೆ ಸರ್ಕಾರ ಮತ್ತೂ ಇಬ್ಬಗೆ ನೀತಿಯಲ್ಲಿದೆ. ನೋಡುವ ಅವರು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದು ಹೇಳಿದರು.
ಸುಮಾರು ಮೂರು ದಶಕಗಳ ಕಾಲ ಶ್ರೀಲಂಕಾದಲ್ಲಿ ಪ್ರತ್ಯೇಕ ತಮಿಳು ರಾಜ್ಯಕ್ಕಾಗಿ ಹೋರಾಟ ನಡೆಸಿದ್ದ ಎಲ್ಟಿಟಿಇ ವಿರುದ್ಧ ಲಂಕಾ ಸರ್ಕಾರ ನಡೆಸಿದ ಸೇನಾ ಕಾರ್ಯಾಚರಣೆಯಿಂದಾಗಿ ಕೊನೆಗೂ ಬಗ್ಗು ಬಡಿದಿತ್ತು. ಅದರ ಪರಿಣಾಮ ಮೇ 18ರಂದು ಎಲ್ಟಿಟಿಇ ವಿರುದ್ಧ ಜಯ ಸಾಧಿಸಿರುವುದಾಗಿ ಲಂಕಾ ಘೋಷಿಸಿತ್ತು. ಈ ಕದನದಲ್ಲಿ ಎಲ್ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ಹತನಾಗಿದ್ದ. |