ದೇಶದಲ್ಲಿ ಕೆಲವು ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆದಿರುವುದು ಜನಾಂಗೀಯ ಹಲ್ಲೆ ಎಂದು ಕೊನೆಗೂ ಆಸ್ಟ್ರೇಲಿಯಾದ ಪೊಲೀಸ್ ವರಿಷ್ಠಾಧಿಕಾರಿ ಮಂಗಳವಾರ ತಪ್ಪೊಪ್ಪಿಕೊಂಡಿದ್ದು, ಇದೊಂದು ಗಂಭೀರ ಸ್ವರೂಪದ ಪ್ರಕರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಸೈಮನ್ ಅವರು ಮಾಧ್ಯಮದೊಂದಿಗೆ ಮಾತನಾಡುತ್ತ, ದೇಶದಲ್ಲಿ ನಡೆದಿರುವ ಕೆಲವು ಲೂಟಿ ಪ್ರಕರಣ ಜನಾಂಗೀಯ ಪ್ರೇರಿತವಾದದ್ದು ಹಾಗೂ ಉಳಿದವರು ಅವಕಾಶವಾದಿಗಳು ಎಂದು ತಿಳಿಸಿದ್ದಾರೆ.
ಏನೇ ಇರಲಿ, ಭಾರತೀಯರ ಮೇಲೆ ನಡೆದಿರುವ ದಾಳಿ ಉತ್ತಮ ಬೆಳವಣಿಗೆಯಲ್ಲ, ಹಿಂಸಾಚಾರ ಎಂಬುದು ಒಳ್ಳೆಯದಲ್ಲ ಅದೇ ರೀತಿ ಲೂಟಿ ಕೂಡ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಜನಾಂಗೀಯ ಹಿಂಸಾಚಾರಕ್ಕೆ ಇಲ್ಲಿ ಅವಕಾಶ ಇಲ್ಲ ಎಂದು ಈ ಸಂದರ್ಭದಲ್ಲಿ ಸೈಮನ್ ಸ್ಪಷ್ಟಪಡಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಲ್ಲೆ ನಡೆಸುವ ಮೂಲಕ ತೀವ್ರ ಟೀಕೆ ವ್ಯಕ್ತವಾಗಿತ್ತು. ಅಲ್ಲದೇ ಭಾರತ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು. ಅಸ್ಟ್ರೇಲಿಯಾದಲ್ಲಿ ಕಳೆದ ಒಂದು ತಿಂಗಳಲ್ಲಿ ಒಟ್ಟು 11ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಲ್ಲೆ ನಡೆಸಲಾಗಿತ್ತು. ಆದರೂ ಆಸ್ಟ್ರೇಲಿಯಾ ಭಾರತೀಯರ ಮೇಲೆ ಜನಾಂಗೀಯ ಹಲ್ಲೆ ನಡೆದಿಲ್ಲ ಎಂದೇ ಸ್ಪಷ್ಟನೆ ನೀಡಿತ್ತು.
ಸುಮಾರು 90ಸಾವಿರ ಭಾರತೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಸಿಡ್ನಿಯಲ್ಲಿ ಭಾನುವಾರ ಪ್ರತಿಭಟನೆ ಜಾಥಾ ನಡೆದಿತ್ತು. |