ತಾಲಿಬಾನ್ ಕಮಾಂಡರ್ ಬೈತುಲ್ಲಾ ಮೆಹ್ಸೂದ್ನ ಭದ್ರಕೋಟೆ ವಾಜಿರಿಸ್ತಾನಕ್ಕೆ ಮುತ್ತಿಗೆ ಹಾಕುವಂತೆ ಸರ್ಕಾರದಿಂದ ಹಸಿರುನಿಶಾನೆ ಸಿಕ್ಕಿರುವುದಾಗಿ ಸೇನೆಯು ತಿಳಿಸಿದ್ದು, ಭದ್ರತಾಪಡೆಗಳು ವಾಜಿರಿಸ್ತಾನಕ್ಕೆ ಹೋಗುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿದೆ. ಸ್ವಾತ್ ಮತ್ತು ಎರಡು ನೆರೆಯ ಜಿಲ್ಲೆಗಳಲ್ಲಿ ಪ್ರಸಕ್ತ ಕಾರ್ಯಾಚರಣೆ ಮುಂದುವರಿದಿದ್ದು, ಪಡೆಗಳು 13 ತಾಲಿಬಾನಿ ಉಗ್ರರನ್ನು ಹತ್ಯೆಮಾಡಿ ಭಯೋತ್ಪಾದಕರ ತರಬೇತಿ ಕೇಂದ್ರವನ್ನು ನಾಶಮಾಡಿರುವ ನಡುವೆ ಸೇನೆಯ ಪ್ರಕಟಣೆ ಹೊರಬಿದ್ದಿದೆ.
ವಾಜಿರಿಸ್ತಾನ ಅಂಚಿನಲ್ಲಿರುವ ಕೊಟಕಾಯಿ,ಸ್ಪೈನ್ಕಾಯಿ ರಾಗ್ಜಿ ಮತ್ತು ಸ್ರರೋಘ ಪ್ರದೇಶದ ಪಟ್ಟಣಗಳ ಮೇಲೆ ಸೇನೆಯು ಫಿರಂಗಿ ದಾಳಿ ನಡೆಸಿದೆ. ಬೈತುಲ್ಲಾ ಮೆಹಸೂದ್ ಮತ್ತು ಅವರ ಜಾಲದ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುವ ನಿರ್ಧಾರವನ್ನು ಸರ್ಕಾರ ಸೇನೆಗೆ ರವಾನಿಸಿದೆಯೆಂದು ಮಿಲಿಟರಿ ವಕ್ತಾರ ಮೇ. ಜನರಲ್ ಅಥಾರ್ ಅಬ್ಬಾಸ್ ತಿಳಿಸಿದ್ದಾರೆ.
ಕಾರ್ಯಾಚರಣೆ ನಡೆಸುವಂತೆ ಸೇನೆಗೆ ಆದೇಶ ನೀಡಲಾಗಿದ್ದು ಅದು ಅಧಿಕೃತವಾಗಿ ಕಾರ್ಯಾಚರಣೆ ಆರಂಭಿಸಿಲ್ಲವೆಂದು ಮಾಹಿತಿ ಖಾತೆ ಸಚಿವ ಕಮಾರ್ ಜಮಾನ್ ಕೈರಾ ತಿಳಿಸಿದರು. ವಾಜಿರಿಸ್ತಾನದಲ್ಲಿ ಸುಮಾರು 8000-12,000 ತಾಲಿಬಾನಿಗಳು, ಅಲ್ ಖಾಯಿದಾ ಮತ್ತಿತರ ಬಂಡುಕೋರರು ಅಡಗಿದ್ದು, ಸೇನೆಗೆ ಇನ್ನಷ್ಟು ಕಾಲಾವಕಾಶ ಅಗತ್ಯವಿದೆ. |