ಭಾರತ-ಪಾಕಿಸ್ತಾನದ ಮುಂಬರುವ ಮಾತುಕತೆ ಕುರಿತು ದಿನಾಂಕ ಮತ್ತು ಕಾರ್ಯಸೂಚಿಗೆ ಅಂತಿಮರೂಪ ನೀಡುವುದಕ್ಕೆ ಸಹಕರಿಸಲು ಭಾರತಕ್ಕೆ ಪಾಕಿಸ್ತಾನದ ಹೈಕಮೀಷನರ್ ಶಾಹಿದ್ ಮಲಿಕ್ ಇಸ್ಲಾಮಾಬಾದ್ಗೆ ಆಗಮಿಸಿದ್ದಾರೆಂದು ಮಾಧ್ಯಮದ ವರದಿ ಗುರುವಾರ ತಿಳಿಸಿದೆ.
ನವದೆಹಲಿಯಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ ಮೆನನ್ ಅವರನ್ನು ಮಂಗಳವಾರ ಭೇಟಿ ಮಾಡಿದ ಮಲಿಕ್, ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳ ಉದ್ದೇಶಿತ ಮಾತುಕತೆ ಕುರಿತು ಒಮ್ಮತ ಮೂಡಿಸಲು ಇಲ್ಲಿಗೆ ಆಗಮಿಸಿದ್ದಾರೆಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಅಬ್ದುಲ್ ಬಸಿತ್ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಉದ್ದೇಶಿತ ಮಾತುಕತೆಯ ವೇಳಾಪಟ್ಟಿ ಮತ್ತು ಕಾರ್ಯಸೂಚಿಯನ್ನು ಇನ್ನೂ ಚರ್ಚಿಸಬೇಕಾಗಿದೆಯೆಂದು ಬಸೀತ್ ಹೇಳಿದ್ದಾರೆ.
ವಿದೇಶಾಂಗ ಸಚಿವಾಲಯದಲ್ಲಿ ಪ್ರಮುಖ ಸಭೆಯೊಂದರಲ್ಲಿ ಮಲಿಕ್ ಭಾಗವಹಿಸಿ ಮುಂಬರುವ ಮಾತುಕತೆ ಕುರಿತು ವಿಚಾರವಿನಿಮಯ ನಡೆಸಲಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ. ಭೇಟಿ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ, ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ಮುಂದಿನ ವಾರ ನಡೆಯಬಹುದೆಂದು ಹೇಳಲಾಗಿದೆ.
ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕ್ ಅಧ್ಯಕ್ಷ ಜರ್ದಾರಿ ಶಾಂಘಾಯ್ ಸಹಕಾರ ಸಂಘಟನೆ ಶೃಂಗಸಭೆಯ ನೇಪಥ್ಯದಲ್ಲಿ ಭೇಟಿಯಾಗಿದ್ದಾಗ ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆಯ ಪ್ರಸ್ತಾಪ ಮಾಡಿದ್ದರು. ಮುಂಬೈ ಭಯೋತ್ಪಾದನೆ ದಾಳಿಗಳ ಬಳಿಕ ಪಾಕಿಸ್ತಾನ ಮೂಲದ ಲಷ್ಕರೆ ತಯ್ಯಬಾ ಕೈವಾಡ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ನೆರೆಯ ರಾಷ್ಟ್ರಗಳ ನಡುವೆ ಶಾಂತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. |