ಕಾಶ್ಮೀರ ಸಮಸ್ಯೆ-ಮುಷ್ ಸೂತ್ರ ಅರ್ಥವಿಲ್ಲದ್ದು: ಪಾಕಿಸ್ತಾನ
ಇಸ್ಲಾಮಾಬಾದ್, ಬುಧವಾರ, 30 ಜೂನ್ 2010( 16:21 IST )
ಭಾರತ ಮತ್ತು ಪಾಕಿಸ್ತಾನ ನಡುವೆ ತಲೆದೋರಿರುವ ಕಾಶ್ಮೀರ ವಿವಾದ ಇತ್ಯರ್ಥ ಕುರಿತಂತೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರ ನಾಲ್ಕ ಅಂಶದ ಸೂತ್ರ ಕೆಲಸಕ್ಕೆ ಬಾರದ್ದು ಎಂದು ಪಾಕ್ ಸರ್ಕಾರ ತಿರಸ್ಕರಿಸಿದೆ.
ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಮುಷರ್ರಫ್ ಅವರ ನಾಲ್ಕಂಶದ ಸೂತ್ರ ಅವರ ಆಲೋಚನೆಯಾಗಿದೆ. ಹಾಗಾಗಿ ಅದಕ್ಕೆ ಸಂಸತ್ನಲ್ಲಿ ಅಥವಾ ಕ್ಯಾಬಿನೆಟ್ನಲ್ಲಿ ಒಪ್ಪಿಗೆ ಪಡೆಯಬೇಕಾದಂತಹ ಅಗತ್ಯವಿಲ್ಲ ಎಂದು ಪಾಕಿಸ್ತಾನ ಸರ್ಕಾರ ಸ್ಪಷ್ಟಪಡಿಸಿದೆ. ಅಲ್ಲದೇ ಈ ಸಮಸ್ಯೆ ಇತ್ಯರ್ಥ ಕುರಿತಂತೆ ಹೊಸ ಸೂತ್ರವೊಂದನ್ನು ಕಂಡುಕೊಳ್ಳಲಾಗುವುದು ಎಂದು ಹೇಳಿದೆ.
ಆ ನಿಟ್ಟಿನಲ್ಲಿ ಜುಲೈ 15ರಂದು ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಹಾಗೂ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ನಡುವೆ ಮಾತುಕತೆ ನಡೆಯಲಿದೆ. ಆ ಸಂದರ್ಭದಲ್ಲಿನ ಚರ್ಚೆ ವೇಳೆ ಉಭಯ ದೇಶಗಳ ನಡುವಿನ ಸಮಸ್ಯೆ ಇತ್ಯರ್ಥ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಖುರೇಷಿ ತಿಳಿಸಿದ್ದಾರೆ.
ಮಾತುಕತೆ ವೇಳೆ ನಾವು ಯಾವ ವಿಷಯವನ್ನೂ ಕಡೆಗಣಿಸುವುದಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಕಾರಾತ್ಮಕ ಬೆಳವಣಿಗೆ ಕುರಿತಂತೆಯೂ ಪಾಕ್ ನಿರ್ಲಕ್ಷ್ಯ ತೋರುವುದಿಲ್ಲ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಶಾ ಸ್ಪಷ್ಟಪಡಿಸಿದ್ದಾರೆ.