ಉಭಯ ನಾಯಕರೂ "ಮಾತುಕತೆಯೇ ಪರಿಹಾರ" ಎಂಬ ಹಳೇ ರಾಗಕ್ಕೆ ಜೋತುಬೀಳುವುದರೊಂದಿಗೆ ಭಾರತ-ಪಾಕಿಸ್ತಾನ ನಡುವಣ ವಿದೇಶಾಂಗ ಸಚಿವರ ನಡುವಿನ ಮಾತುಕತೆಯು ನಿರೀಕ್ಷಿತ ಫಲಿತಾಂಶ ತಂದಿದೆ. ಮಾತುಕತೆಯ ನಂತರ ಪಾಕಿಸ್ತಾನವು ತನ್ನ ಎಂದಿನ ಹಳಿಗೆ ಮರಳಿದರೆ, ಉಗ್ರರಿಗೆ ಪಾಕ್ ಕಡಿವಾಣ ಹಾಕುವಂತೆ ಮಾಡುವಲ್ಲಿ ಭಾರತವು ಕೂಡ ಮತ್ತೆ ವಿಫಲವಾಗಿ, ಉಭಯ ರಾಷ್ಟ್ರಗಳು ಪರಸ್ಪರ ದೂಷಣೆಯ ಸ್ಥಿತಿಗೆ ಮರಳಿವೆ.
ಅತ್ಯಂತ ಮಹತ್ವಪೂರ್ಣವಾದ ಮುಂಬೈ ದಾಳಿ, ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ಒಳನುಸುಳುವಿಕೆ ಕುರಿತು ಪಾಕಿಸ್ತಾನವು ಜವಾಬ್ದಾರಿಯುತವಾಗಿ ಭರವಸೆ ನೀಡಲಿಲ್ಲ ಮತ್ತು ನ್ಯಾಯಾಂಗ ಪ್ರಕ್ರಿಯೆಗೆ "ವೇಗ" ಕೊಡಲು ತನ್ನಿಂದಾಗದು ಎಂದು ವರಾತ ತೆಗೆದಿದೆ. ಇದರೊಂದಿಗೆ ಭಾರತ-ಪಾಕ್ ಮಾತುಕತೆಯ ಉದ್ದೇಶವು ಬಹುತೇಕ ವೈಫಲ್ಯವಾಗಿದೆ.
ಗುರುವಾರ ಮಾತುಕತೆಯ ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಹಾಗೂ ಪಾಕ್ ವಿದೇಶ ಸಚಿವ ಶಾ ಮಹಮದ್ ಖುರೇಷಿ ಪರಸ್ಪರ ದೋಷಾರೋಪದಲ್ಲಿ ನಿರತರಾದರು. ಪಾಕಿಸ್ತಾನವು ಮತ್ತದೇ "ಬಲೂಚಿಸ್ತಾನದಲ್ಲಿ ಭಾರತದ ಕೈವಾಡ" ಎಂಬ ಅಂಶವನ್ನು ಎತ್ತಿತು. ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣ, "ಇದಕ್ಕೆ ಪಕ್ಕಾ ಸಾಕ್ಷ್ಯವಿರಲಿ, ಸಾಕ್ಷ್ಯದ ಲೇಪನ ಕೂಡ ಇಲ್ಲ" ಎಂದು ಹೇಳಿದರು.